ಅರುಣ್ ಜೇಟ್ಲಿ ನಿಧನ ಹಿನ್ನೆಲೆ: ಖಾತೆ ಹಂಚಿಕೆ ಸೋಮವಾರಕ್ಕೆ ಮುಂದೂಡಿಕೆ

Update: 2019-08-24 12:48 GMT

ಬೆಂಗಳೂರು, ಆ. 24: ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರದ ನೂತನ ಸಚಿವರ ಖಾತೆ ಹಂಚಿಕೆ ಮತ್ತೆ ಮುಂದೂಡಿಕೆಯಾಗಿದೆ.

ನಾಳೆ ಬೆಳಗ್ಗೆ 9:45ರ ಸುಮಾರಿಗೆ ಹೊಸದಿಲ್ಲಿಗೆ ಪ್ರಯಾಣ ಬೆಳೆಸಲಿರುವ ಸಿಎಂ ಯಡಿಯೂರಪ್ಪ, ಅರುಣ್ ಜೇಟ್ಲಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದು, ನಾಳೆ ರಾತ್ರಿ 8ಗಂಟೆಯ ಸುಮಾರಿಗೆ ದಿಲ್ಲಿಯಿಂದ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಹೀಗಾಗಿ ಸೋಮವಾರ(ಆ.26) ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುವ ಸಾಧ್ಯತೆಗಳಿವೆ.

ಸಿದ್ಧತೆ ನಡುವೆ ನಿಧನದ ಸುದ್ದಿ: ಶನಿವಾರ(ಆ.24) ಮಧ್ಯಾಹ್ನದ ವೇಳೆ ನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮಗೊಳಿಸಿ ಪಟ್ಟಿ ರಾಜ್ಯಪಾಲರಿಗೆ ರವಾನಿಸಲು ಸಿಎಂ ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಜೇಟ್ಲಿ ಅವರ ನಿಧನದ ಸುದ್ದಿ ಹೊಸದಿಲ್ಲಿಯಿಂದ ಬಂದಿದ್ದರಿಂದ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಸೂಕ್ತ ಸ್ಥಾನಮಾನಕ್ಕಾಗಿ ಅನರ್ಹ ಶಾಸಕರ ಪಟ್ಟು, ನೂತನ ಸಚಿವರ ಖಾತೆ ಹಂಚಿಕೆ ಗೊಂದಲ, ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಬಿಎಸ್‌ವೈ ಖಾತೆ ಹಂಚಿಕೆ ಮೂಲಕ ಗೊಂದಲ ಪರಿಹಾರಕ್ಕೆ ಮುಂದಾಗಿದ್ದರು. ಆ ಹಿನ್ನೆಲೆಯಲ್ಲಿ ತಮ್ಮ ಡಾಲರ್ಸ್‌ ಕಾಲನಿಯಲ್ಲಿನ ದವಳಗಿರಿ ನಿವಾಸದಲ್ಲಿ ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಸೇರಿದಂತೆ ಆಪ್ತರ ಜತೆ ಸುದೀರ್ಘ ಸಮಾಲೋಚನೆಯನ್ನೂ ನಡೆಸಿದ್ದರು. ಸಚಿವ ಸ್ಥಾನ ವಂಚಿತರಿಗೂ 2ನೆ ಬಾರಿ ಸಂಪುಟ ವಿಸ್ತರಣೆ ಮೂಲಕ ಸ್ಥಾನ ಕಲ್ಪಿಸುವ ಬಗ್ಗೆಯೂ ಚರ್ಚಿಸಿದ್ದರು.

ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ರಾಜೂಗೌಡ, ರೇಣುಕಾಚಾರ್ಯ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಜಿ.ಬೋಪಯ್ಯ ಸೇರಿದಂತೆ ನಾಲ್ಕೈದು ಮಂದಿಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಅನರ್ಹರಾದ ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್, ಮಹೇಶ್ ಕುಮಟಳ್ಳಿ, ಬಿ.ಸಿ.ಪಾಟೀಲ್, ಬೈರತಿ ಬಸವರಾಜ್, ಗೋಪಾಲಯ್ಯ, ಎಂಟಿಬಿ ನಾಗರಾಜ್ ಸೇರಿ ಇನ್ನಿತರರಿಗೆ ಪ್ರಮುಖ ಖಾತೆ ನೀಡಲು ತೀರ್ಮಾನಿಸಲಾಗಿದೆ. ಆದರೆ, ಅವರ ಪ್ರಕರಣ ಇತ್ಯರ್ಥ ಆದ ಬಳಿಕ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ.

ಡಿಸಿಎಂ ಗೊಂದಲ: ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಹಿರಿಯ ಮತ್ತು ಪ್ರಬಲ ಸಮುದಾಯದ ಶಾಸಕರೇ ಆರೇಳು ಮಂದಿ ಇದ್ದು, ಅವರೆಲ್ಲರೂ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಮೂರ್ನಾಲ್ಕು ಡಿಸಿಎಂ ಸ್ಥಾನ ಸೃಷ್ಟಿಸಿಲು ಬಿಎಸ್‌ವೈ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಆದರೆ, ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿಯೂ ಡಿಸಿಎಂ ಸ್ಥಾನ ನೀಡಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಏಕೆ ಎಂದು ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ. ಹೀಗಾಗಿ ಬಿಎಸ್‌ವೈ ಸಂಕಷ್ಟಕ್ಕೆ ಸಿಲುಕಿದ್ದು, ಸೋಮವಾರ ಖಾತೆ ಹಂಚಿಕೆ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಎಳೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News