ಸುಂಟಿಕೊಪ್ಪ, ಮಾದಾಪುರ ಭಾಗದಲ್ಲಿ ಮಿತಿ ಮೀರಿದ ಕಾಡಾನೆ ಉಪಟಳ

Update: 2019-08-24 18:02 GMT

ಮಡಿಕೇರಿ, ಆ.24: ಸುಂಟಿಕೊಪ್ಪ, ಮಾದಾಪುರ, ಹರದೂರು, ಗರಗಂದೂರು ವ್ಯಾಪ್ತಿಯ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ದಾಳಿಯಿಂದ ಅಪಾರ ಬೆಳೆ ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.

ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ, ಕರಿಮೆಣಸು, ಬಾಳೆತೋಟಗಳನ್ನು ಧ್ವಂಸಗೊಳಿಸಿವೆ.

ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಅಂಜುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ. ರಾತ್ರಿ ವೇಳೆ ಸುಂಟಿಕೊಪ್ಪದಿಂದ ಮಾದಾಪುರದೆಡೆಗೆ ಸಂಚರಿಸುವ ವಾಹನಗಳಿಗೆ ಕಾಡಾನೆ ಹಿಂಡಿನಿಂದ ಅಡಚಣೆಯಾಗಿದೆ. ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ನಿಯಂತ್ರಿಸದಿದ್ದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News