ಮಧ್ಯಂತರ ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು: ಸಿದ್ದರಾಮಯ್ಯ

Update: 2019-08-26 13:44 GMT

ಹುಬ್ಬಳ್ಳಿ, ಆ. 25: ‘ಮಧ್ಯಂತರ ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು, ಈ ಉದ್ದೇಶಕ್ಕಾಗಿ ಪಕ್ಷ ಬಲಪಡಿಸುವಂತೆ ನಮ್ಮವರಿಗೆ ಕರೆ ನೀಡಿದ್ದೇನೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಸರಕಾರ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಬಂಡಾಯ ಶಾಸಕರನ್ನು ಸೇರಿಸಿಕೊಂಡು ಸರಕಾರ ನಡೆಸುವುದು ಸುಲಭದ ಮಾತಲ್ಲ, ‘ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟವಿರುವಾಗ, ವಿಷ ಕುಡಿದ ಮಕ್ಕಳು ಬದುಕುತ್ತವಾ?’ ಎಂದು ಪ್ರಶ್ನಿಸಿದರು.

ಅತೃಪ್ತ ಶಾಸಕರನ್ನು ಇಟ್ಟುಕೊಂಡು ಸರಕಾರ ಮುನ್ನಡೆಸುವುದಕ್ಕೆ ಆಗುತ್ತದೆಯೇ? ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತರನ್ನು ನಂಬಿಕೊಂಡು ರಚಿಸಿರುವ ಈ ಸರಕಾರ ಒಂದು ವರ್ಷ ಇದ್ದರೆ ಹೆಚ್ಚು ಎಂದು ಭವಿಷ್ಯ ನುಡಿದ ಸಿದ್ದರಾಮಯ್ಯ, ಮತದಾರರು ಬಿಜೆಪಿಗೆ ಬಹುಮತ ಕೊಟ್ಟಿಲ್ಲ. ಆದರೂ, ವಾಮಮಾರ್ಗದಿಂದ ಸರಕಾರ ರಚಿಸಿದ್ದಾರೆ. ಹೀಗಾಗಿ, ಜನರೇ ಅವರಿಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಯಡಿಯರಪ್ಪ ಒಳಗೊಂಡಂತೆ ಸರಕಾರದ ಎಲ್ಲ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಇದನ್ನು ಬಿಟ್ಟು ನಿತ್ಯ ಬೆಂಗಳೂರಿನಿಂದ ದಿಲ್ಲಿ, ದಿಲ್ಲಿಯಿಂದ ಬೆಂಗಳೂರಿಗೆ ಓಡಾಡುತ್ತಿದ್ದರೆ ಜನರ ಕಷ್ಟ ಕೇಳುವವರಾರು? ಎಂದು ಪ್ರಶ್ನಿಸಿದರು.

ಅನೈತಿಕ ಮಾರ್ಗದ ಮೂಲಕ ಅಧಿಕಾರ ಹಿಡಿದವರ ಕತೆಯೇ ಹೀಗೆ, ಅವರಿಗೆ ಜನಪರ ಕಾಳಜಿಯಿರಲ್ಲ. ಕೇಂದ್ರ ಸರಕಾರದಿಂದ ಈವರೆಗೂ 1ರೂ. ಪರಿಹಾರ ತರಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ ಅವರು, ಪ್ರವಾಹ ಸಂಭವಿಸಿ 20 ದಿನವಾದರೂ, ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಪ್ರವಾಹದಿಂದಾಗಿ 1ಲಕ್ಷ ಕೋಟಿ ರೂ.ಗಳು ಅಧಿಕ ನಷ್ಟವಾಗಿದೆ. ಆದರೆ, ಸಿಎಂ ಯಡಿಯೂರಪ್ಪಗರಿಷ್ಠ 50 ಸಾವಿರ ಕೋಟಿ ರೂ., ಮತ್ತೊಮ್ಮೆ 40 ಸಾವಿರ ಕೋಟಿ ರೂ. ನಷ್ಟವಾಗಿದೆ ಎನ್ನುತ್ತಿದ್ದಾರೆ ಎಂದ ಅವರು, ಜನರಿಗೆ ಮನಬಂದಂತೆ ಪರಿಹಾರ ನೀಡದೆ, ವಾಸ್ತವವಾಗಿ ಆಗಿರುವ ನಷ್ಟವನ್ನು ಲೆಕ್ಕ ಹಾಕಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಶೆಡ್ ನಿರ್ಮಿಸಲು ಆಗ್ರಹ: ಎನ್‌ಡಿಆರ್‌ಎಫ್ ಮಾನದಂಡಗಳಿಗೂ ನಷ್ಟಕ್ಕೂ ಸಂಬಂಧವಿಲ್ಲ. ಬೇಕಿದ್ದರೆ ಮಾನದಂಡಗಳನ್ನು ಸಡಿಲಿಸಿ, ಎಸ್‌ಡಿಆರ್‌ಎಫ್‌ನಿಂದ ಜನರಿಗೆ ಪರಿಹಾರ ಕೊಡಬಹುದು. ಸಂತ್ರಸ್ತರಿಗೆ ಮೊದಲು ತಾತ್ಕಾಲಿಕ ಶೆಡ್ ನಿರ್ಮಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ತಾಣ ಒದಗಿಸುವಂತೆ ಕಳೆದ ವಾರವೇ ಆಗ್ರಹಿಸಿದ್ದೆ. ಸರಕಾರ ಇನ್ನೂ ಕಣ್ಣುಮುಚ್ಚಿ ಕೂತಿದೆ. ಎರಡ್ಮೂರು ಸಾವಿರ ರೂ. ಪರಿಹಾರ ನೀಡಿದರೆ ಕಷ್ಟ ದೂರಾಗುವುದಿಲ್ಲ. ನಷ್ಟವನ್ನು ಸರಿಯಾಗಿ ಅಂದಾಜಿಸಿ, ಪರಿಹಾರ ಒದಗಿಸಬೇಕು. ಇದಕ್ಕೆ ಬೇಕಾದ ಅನುದಾನವನ್ನು ಕೇಂದ್ರ ಅಥವಾ ರಾಜ್ಯ ಸರಕಾರವೇ ಭರಿಸಲಿ ಎಂದು ಅವರು ಕೋರಿದರು.

‘ಪ್ರವಾಹ ಪರಿಸ್ಥಿತಿ ಸಮೀಕ್ಷೆಗೆ ಕೇಂದ್ರದ ತಂಡ ಆಗಮಿಸಿದೆ. ಪ್ರವಾಹದಿಂದಾಗಿ ಸುಮಾರು 20ಲಕ್ಷ ಎಕರೆ ಬೆಳೆ ಹಾನಿ, 80 ಜನರ ಪ್ರಾಣ ಹಾನಿಯಾಗಿದ್ದು, ಲಕ್ಷಾಂತರ ಮನೆಗಳು ನೆಲಸಮಗೊಂಡಿವೆ. ಸಾವಿರಾರು ಜಾನುವಾರುಗಳು ಸಾವಿಗೀಡಾಗಿವೆ. ಇದನ್ನೆಲ್ಲ ಸೂಕ್ತವಾಗಿ ಸಮೀಕ್ಷೆ ನಡೆಸಿ, ನ್ಯಾಯಯುತ ಪರಿಹಾರ ಒದಗಿಸಲಿ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News