ಬಿಜೆಪಿ ಮಾಜಿ ಸಂಸದ ಚಿನ್ಮಯಾನಂದ ವಿರುದ್ಧ ಕಿರುಕುಳ, ಅಪಹರಣದ ಆರೋಪ ಹೊರಿಸಿದ್ದ ವಿದ್ಯಾರ್ಥಿನಿ ಪತ್ತೆ
ಲಕ್ನೋ, ಆ.30: ಬಿಜೆಪಿಯ ಮಾಜಿ ಸಂಸದ ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಅಪಹರಣದ ಆರೋಪ ಹೊರಿಸಿದ್ದ, ಉತ್ತರಪ್ರದೇಶದ ಶಹಜಹಾನ್ಪುರದಿಂದ ನಾಪತ್ತೆಯಾಗಿದ್ದ ಕಾನೂನು ವಿದ್ಯಾರ್ಥಿನಿ ಶುಕ್ರವಾರ ರಾಜಸ್ಥಾನದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಕಾನೂನು ವಿದ್ಯಾರ್ಥಿನಿ ಆಗಸ್ಟ್ 23ರಂದು ನಾಪತ್ತೆಯಾಗಿದ್ದರು. ಆಗಸ್ಟ್ 24ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದ ಆಕೆ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.
ಚಿನ್ಮಯಾನಂದ ಹಾಗೂ ಆತನ ಸಹಚರರು ತನಗೆ ಹಾಗೂ ಹಾಸ್ಟೆಲ್ನ ಇತರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ತನ್ನ ಪುತ್ರಿ ಆರೋಪಿಸಿದ್ದಾಳೆ ಎಂದು ಸಂತ್ರಸ್ತೆಯ ತಂದೆ ಶಹಜಾನ್ಪುರದ ಎಸ್ಪಿಗೆ ದೂರು ನೀಡಿದ್ದರು.
ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ತನ್ನ ಹಾಗೂ ಹಾಸ್ಟೆಲ್ನಲ್ಲಿರುವ ಇತರ ವಿದ್ಯಾರ್ಥಿನಿಯರ ಜೀವನ ಹಾಳು ಮಾಡಿದ್ದಾನೆ. ಈ ಕುರಿತು ಆತನ ವಿರುದ್ಧ ಪುರಾವೆಗಳು ತನ್ನ ಬಳಿಯಿದೆ. ಆತ ತುಂಬಾ ಪ್ರಭಾವಶಾಲಿಯಾಗಿದ್ದು, ಎಸ್ಪಿ ಹಾಗೂ ಡಿಎಂ ಆತನ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು 1.27 ನಿಮಿಷಗಳ ವಿಡಿಯೋದಲ್ಲಿ ಕಾನೂನು ವಿದ್ಯಾರ್ಥಿನಿಯು ಆರೋಪಿಸಿದ್ದರು.
ವಿದ್ಯಾರ್ಥಿನಿಯನ್ನು ರಾಜಸ್ಥಾನಕ್ಕೆ ವಶಕ್ಕೆ ಪಡೆಯಲಾಗಿದೆ. ಆಕೆಯನ್ನು ಶಹಜಹಾನ್ಪುರಕ್ಕೆ ಕರೆದುಕೊಂಡು ಬರಲಾಗುವುದು. ರಾಜಸ್ಥಾನಕ್ಕೆ ಆಕೆ ಹೇಗೆ ತಲುಪಿದ್ದಾಳೆಂಬ ಬಗ್ಗೆ ಬಳಿಕ ಮಾಧ್ಯಮಗಳಿಗೆ ತಿಳಿಸುವುದಾಗಿ ಉತ್ತರಪ್ರದೇಶದ ಡಿಜಿಪಿ ಒ.ಪಿ.ಸಿಂಗ್ ತಿಳಿಸಿದ್ದಾರೆ.