ಉತ್ತಮ ಸರಕಾರ ರಚನೆಯ ಕೀಲಿಕೈ ಮತದಾನ: ನ್ಯಾ.ಉಮೇಶ್ ಅಡಿಗ

Update: 2019-09-01 18:10 GMT

ಚಿಕ್ಕಮಗಳೂರು, ಸೆ.1: ಮತದಾರರು ಮತದಾನದ ಮಹತ್ವವನ್ನು ಅರಿತಾಗ ಮಾತ್ರ ಉತ್ತಮವಾದ ಸರಕಾರವನ್ನು ರೂಪಿಸಬಹುದು. ಪ್ರಜಾಪ್ರಭುತ್ವದ ಉಳಿವಿಗೆ ಮತದಾನ ಅತ್ಯಾವಶ್ಯಕ. ಪ್ರತಿಯೊಬ್ಬರೂ ಮತದಾನ ಮಹತ್ವ ಅರಿಯಬೇಕು ಮತ್ತು ಮತದಾನಕ್ಕೆ ಮುಂದಾಗಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ್ ಎಂ. ಅಡಿಗ ಕರೆ ನೀಡಿದ್ದಾರೆ.

ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ರವಿವಾರ ಆಯೋಜಿಸಿದ್ದ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020 ಸಮಾರಂಭ ಉದ್ಘಾಟಿಸಿ ಮಾತಾನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ 1950ರಲ್ಲಿ ಸಂವಿಧಾನ ರಚನೆ ಮಾಡಿ ಅದರ ಪ್ರಕಾರವಾಗಿ ಜನಪ್ರತಿನಿಧಿಗಳನ್ನು ಜನರೇ ಆಯ್ಕೆ ಮಾಡಿ, ಜನರೇ ಆಳುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂವಿಧಾನ ಅಳವಾಡಿಸಿಕೊಂಡಿದೆ. ಉತ್ತಮ ಆಡಳಿತ, ಸರಕಾರದ ರಚನೆಗೆ ಪ್ರತಿಯೊಬ್ಬ ಪ್ರಜೆಗೂ ಕೀಲಿ ಕೈಯಂತೆ ಮತದಾನದ ಹಕ್ಕನ್ನು ನೀಡಿಲಾಗಿದೆ. ಇಂತಹ ಪವಿತ್ರವಾದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯೂ ಜವಾಬ್ಧಾರಿಯುತವಾಗಿ ಚಲಾಯಿಸಿದಾಗ ಮಾತ್ರ ವ್ಯವಸ್ಥಿತವಾದ ಸರಕಾರವನ್ನು ರೂಪಿಸಲು ಸಾಧ್ಯ ಎಂದು ಹೇಳಿದರು.

ಮತದಾನವೆಂಬ ಪವಿತ್ರವಾದ ಹಕ್ಕಿನ ಕುರಿತಾಗಿ ಜನರು ಗಮನಹರಿಸದೆ ಇರುವುದರಿಂದ ಮತದಾನದ ಗುರಿತಿನ ಚೀಟಿಯಲ್ಲಿ ಹಲವು ತೊಂದರೆಗಳು ಕಂಡುಬರುತ್ತಿವೆ. ಆದರೆ ಪ್ರಸಕ್ತ ಗುರುತಿನ ಚೀಟಿಯಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಸರಕಾರ ಉತ್ತಮವಾದ ವೇದಿಕೆಯನ್ನು ನಿರ್ಮಿಸಿದೆ. ಮತದಾರರು ಚುನಾವಣೆಯ ಸಂದರ್ಭದಲ್ಲಿ ಬೆಟ್ಟಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡುವುದಕ್ಕೆ ಹೋಗುವ ಗಾದೆಯನ್ನು ಅನುಸರಿ ಸರಕಾರವನ್ನು ದೂರದೆ, ಗುರುತಿನ ಚೀಟಿಯಲ್ಲಿರುವ ಲೋಪದೋಷಗಳನ್ನು ಪರಿಶೀಲಿಸಲು ಮುಂದಾಗಬೇಕು. ಬಹಳಷ್ಟು ಮತದಾರರಿಗೆ ವಿದ್ಯಾಭ್ಯಾಸದ ಕೊರತೆಯಿಂದ ಸರಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಮಾಹಿತಿಯನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ವಿದ್ಯಾವಂತ ಯುವಕರು ಮಾಡಬೇಕಾದ ಅವಶ್ಯಕವಿದೆ ಎಂದು ಉಮೇಶ್ ಅಡಿಗ ಹೇಳಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತಾನಾಡಿ ,ಜಿಲ್ಲೆಯಲ್ಲಿ ಪ್ರತಿವರ್ಷ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ ಈ ವರ್ಷ ಭಾರತ ಚುನಾವಣಾ ಆಯೋಗದಿಂದ ಬಂದಿರುವ ನಿರ್ದೇಶನಗಳ ಅನುಸಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಬೂತ್ ಮಟ್ಟದ ಅಧಿಕಾರಿಗಳ ಜೊತೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಜಿಲ್ಲೆಯಲ್ಲಿರುವ ಎಲ್ಲಾ ಮತದಾರರ ಮನೆ-ಮನೆಗಳಿಗೂ ತೆರಳಿ ಸೆ.1ರಿಂದ 30ರವರೆಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿಯಲ್ಲಿ ಇರುವಂತಹ ಲೋಪದೋಷಗಳನ್ನು ನಿವಾರಿಸುವ ಕೆಲಸ ಮಾಡಲಾಗುವುದು ಎಂದರು. 

ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಈ ವರ್ಷದಿಂದ ಕೇಂದ್ರ ಸರಕಾರದ ನಿರ್ದೇಶನದಂತೆ ಮತದಾರರ ವಿವರಗಳನ್ನು ಮತದಾರರ ಮನೆಗಳಿಗೆ ತೆರಳಿ ಮತದಾರರ ಗುರುತಿನ ಚೀಟಿಯಲ್ಲಿರುವ ದೋಷಗಳನ್ನು ಸರಿಪಡಿಸಲಾಗುವುದು.

ಲೋಪದೋಷಗಳಿರುವ ಗುರುತಿನ ಚೀಟಿಯನ್ನು ಸರಿ ಪಡಿಸಲು ಮತದಾರರೇ ಮತದಾರರ ಸಹಾಯವಾಣಿ ಮೊಬೈಲ್ ಆಪ್, ಎನ್.ವಿ.ಎಸ್.ಪಿ ಪೋರ್ಟಲ್, 1950 ಮತದಾರರ ಸಹಾಯವಾಣಿ ಅಥವಾ ಹತ್ತಿರಾದ ಸಾಮಾನ್ಯ ಸೇವಾ ಕೇಂದ್ರ, ಮತದಾರ ನೋಂದಾಣಿ ಅಧಿಕಾರಿಗಳ ಕಚೇರಿಯಲ್ಲಿರುವ ಮತದಾರರ ಪೂರಕ ಕೇಂದ್ರ, ಕರ್ನಾಟಕ ಒನ್, ಗ್ರಾಮ ಪಂಚಾಯತ್‍ನಲ್ಲಿರುವ ಬಾಪೂಜಿ ಸೇವಾ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರ ಹಾಗೂ ಮತಗಟ್ಟೆ ಅಧಿಕಾರಿಯನ್ನು ಭೇಟಿ ಮಾಡಿ ಗುರುತಿನ ಚೀಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಮತದಾರರ ಪಟ್ಟಿಯು ಮುಖ್ಯವಾದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯು ಆರೋಗ್ಯರ ಮತ್ತು ಲೋಪದೋಷಗಳಿಂದ ಮುಕ್ತವಾಗಿರಬೇಕೆಂಬ ಉದ್ದೇಶದಿಂದ ಸಾರ್ವಜನಿಕರಿಗೆ ಹಾಗೂ ಎಲ್ಲಾ ಮತದಾರರಿಗೆ ಸುವರ್ಣಾವಕಾಶ ನೀಡಲಾಗಿದೆ ಎಂದರು.

ಪ್ರತಿವರ್ಷ ಅಕ್ಟೋಬರ್‍ನಿಂದ ಡಿಸೆಂಬರ್‍ವರೆಗೆ ಸಂಕ್ಷಿಪ್ತ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಾಗುತಿತ್ತು, ಆದರೆ ಈ ವರ್ಷ ಪ್ರಾರಂಭವಾಗುವ ಮುಂಚೆಯೇ ರವಿವಾರ ದೇಶದ 530 ಜಿಲ್ಲೆಗಳಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡು ಚುನಾವಣಾ ಸಮಯದಲ್ಲಿ ಮತದಾನ ಮಾಡುವಾಗ ಸುಲಲಿತವಾಗಿ ಮತದಾನ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020 ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಬಸವರಾಜ್ ಚೇಂಗಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಜಗೋಪಾಲ್, ನಗರಸಭೆ ಆಯುಕ್ತ ಪರಮೇಶಿ, ಚಿಕ್ಕಮಗಳೂರು ತಾಲೂಕು ತಹಶೀಲ್ದಾರ್ ನಂದಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News