ಅಂಚಿನಲ್ಲಿರುವವರು ಮುಂಚೂಣಿಗೆ ಬರುವ ಬಗೆ

Update: 2019-09-03 18:35 GMT
ಒಂದು ಚುನಾವಣಾ ಪ್ರಜಾತಂತ್ರದಲ್ಲಿ ರಾಜಕೀಯ ಅಂಚಿನಲ್ಲಿರುವವರ ಬಗೆಗಿನ ಚರ್ಚೆ ವಿಪರ್ಯಾಸವಾಗಿ ಕಾಣಬಹುದು. ಸಂಸದೀಯ ಪ್ರಜಾತಂತ್ರದ ಪರವಾಗಿ ಮಾಡುವ ವಾದಗಳಲ್ಲಿ ಅದನ್ನು ಒಂದು ಸೈದ್ಧಾಂತಿಕ ದೃಷ್ಟಿಕೋನದ ಭಾಗವಾಗಿ ಮಾಡಲಾಗುತ್ತದೆ. ಅಲ್ಲಿ ಅಂಚಿನಲ್ಲಿರುವವರ ಅಸಂಗತ ಅಸ್ತಿತ್ವವು ಚರ್ಚೆಯಾಗುತ್ತದೆ. ತನ್ನ ಗತಿಶೀಲತೆಯ ಭಾಗವಾಗಿ ಒಂದು ಸಂಸದೀಯ ಪ್ರಜಾತಂತ್ರದ ತತ್ವವು ಸಾಂಸ್ಥಿಕ ಅಧಿಕಾರದಲ್ಲಿರುವ ನಾಯಕರನ್ನು ಸತತವಾಗಿ ಬದಲಾಯಿಸುತ್ತದೆಂದು ನಿರೀಕ್ಷಿಸಲಾಗುತ್ತದೆ. ಈ ವರ್ತುಲ ಚಲನಶೀಲತೆಯ ಭಾಗವಾಗಿ ತಾತ್ವಿಕವಾಗಿ ಅಂಚಿನಲ್ಲಿ, ತಳದಲ್ಲಿರುವವರು ಮೇಲೇರಬಹುದು ಮತ್ತು ಮೇಲಿರುವವರು ಏಣಿಯ ಕೆಳಗೆ ದೂಡಲ್ಪಡಬಹುದು. ಈ ಬದಲಾವಣೆಯನ್ನು ಪ್ರಜಾತಂತ್ರದಲ್ಲಿರುವ ಚುನಾವಣೆಯ ಅಂಶವು ಸಾಧಿಸಬೇಕು. ಒಂದು ಜೀವಂತ ಪ್ರಜಾತಂತ್ರದಲ್ಲಿ ಅಂಚಿನಲ್ಲಿರುವವರ ಜೀವಿತವು ಎಂದಿಗೂ ಸ್ಥಗಿತಗೊಂಡಿರುವುದಿಲ್ಲ; ಅವರು ಅಧಿಕಾರದ ಕೇಂದ್ರಕ್ಕೆ ಬರಬಲ್ಲ ಚಲನಶೀಲತೆಯನ್ನು ಪಡೆದಿರುತ್ತಾರೆ. ಆದರೂ, ಭಾರತೀಯ ಪ್ರಜಾತಂತ್ರವು ಮಾತ್ರ ತನ್ನದೇ ಅಂಚನ್ನು ಸೃಷ್ಟಿಸಿಕೊಂಡಿದೆ; ಇಲ್ಲಿ ಕೇಂದ್ರದ ಜೊತೆ ಅಂಚಿಗೆ ಅಸಮ ಸಂಬಂಧವಿರುವುದು ಮಾತ್ರವಲ್ಲದೆ, ಕೇಂದ್ರವು ಸಶಕ್ತವಾಗುತ್ತಾ ಇನ್ನೂ ಸಾಕಷ್ಟು ವರ್ಷಳ ಕಾಲ ಅಧಿಕಾರದಲ್ಲೇ ಸ್ಥಿರವಾಗಿ ಉಳಿದುಕೊಳ್ಳಲು ಬಯಸುತ್ತದೆ. ಭಾರತದಲ್ಲಿ ರಾಜಕೀಯ ಸಂಕಥನಗಳನ್ನು ಬಿಜೆಪಿಯೇ ಮುಂದಿಡುತ್ತಿದ್ದು ಇಡೀ ರಾಜಕೀಯವೇ ಅದರ ಸುತ್ತ ತಿರುಗುತ್ತಿದೆ. ಸಮಕಾಲೀನ ಸಂದರ್ಭದಲ್ಲಿ ವಿರೋಧವೆಂಬುದು ಕೇವಲ ಪ್ರತಿಕ್ರಿಯಾತ್ಮಕವಾಗಿರುವುದರಲ್ಲಿ ಅದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಈ ಸನ್ನಿವೇಶದೊಳಗೆ ಸಣ್ಣಪಕ್ಷಗಳು ಅಥವಾ ಅಂಚಿನಲ್ಲಿರುವ ಪಕ್ಷಗಳು ಎರಡು ಮಾದರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ಎರಡೂ ಮಾದರಿಗಳು ತೋರಿಕೆಯಲ್ಲಿ ಭಿನ್ನವಾಗಿ ಕಾಣುತ್ತವೆ. ಆದರೆ ಸಾರದಲ್ಲಿ ಅವೆರಡೂ ಒಂದೇ ಆಗಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಭಾಗವಾಗಿರುವ ಸಣ್ಣ ಪಕ್ಷಗಳಂತೂ ಸ್ವತಂತ್ರವಾಗಿ ಕೇಂದ್ರ ಸ್ಥಾನಕ್ಕೆ ಬರುವ ಆಶಯಗಳನ್ನೇ ಕೈಬಿಟ್ಟಿವೆ ಹಾಗೂ ಅಂಚಿನಲ್ಲಿರುವ ಜನರ ಬದುಕಿಗೆ ಸಂಬಂಧಪಟ್ಟ ಅಥವಾ ದೇಶಕ್ಕೆ ಸಂಬಂಧಪಟ್ಟ ಗಂಭೀರವಾದ ಸಂಗತಿಗಳ ಬಗ್ಗೆ ಸ್ವತಂತ್ರವಾದ ನಿಲುವನ್ನು ತೆಗೆದುಕೊಳ್ಳುವುದನ್ನು ಕೂಡಾ ಕೈಬಿಟ್ಟಿವೆ. ಅಂಚಿನಲ್ಲಿರುವ ವಂಚನೆಗೊಳಗಾದ ಸಮುದಾಯಗಳ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ಪಕ್ಷಗಳು ಬಹಳ ಎಚ್ಚರಿಕೆಯಿಂದ ತಮ್ಮ ನಿಲುವನ್ನು ತೆಗೆದುಕೊಳ್ಳುತ್ತವೆ ಮತ್ತು ಅದರಲ್ಲಿ ತಾವು ಪ್ರಾಂತೀಯ ಮಟ್ಟದ ರಾಜಕೀಯದಲ್ಲಿ ಉಳಿದುಕೊಂಡು ತಮ್ಮ ಸಂಕುಚಿತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಎಚ್ಚರಿಕೆಯೂ ಪ್ರಧಾನವಾದ ಪಾತ್ರ ವಹಿಸುತ್ತದೆ. ಹೀಗಾಗಿ ನಾವು ಅವರಿಗೆ ಕೇಳಬೇಕಾದ ಪ್ರಶ್ನೆಯೇನೆಂದರೆ: ಈ ರಾಜಕೀಯ ಪಕ್ಷಗಳು ಅಂಚಿನಲ್ಲಿವೆಯೇ? ಈ ಪಕ್ಷಗಳು ಕೇವಲ ಚುನಾವಣಾ ದೃಷ್ಟಿಯಲ್ಲಿ ನೋಡಿದರೆ ಅಂಚಿನಲ್ಲಿರಬಹುದು. ಆದರೆ ಸಾರಭೂತ ರಾಜಕೀಯ ದೃಷ್ಟಿಯಲ್ಲಿ ನೋಡುವುದಾದರೆ ಆ ಪಕ್ಷಗಳು ರಾಜಕೀಯದ ಕೇಂದ್ರದಲ್ಲಿರಬೇಕು. ಈ ಪಕ್ಷಗಳಿಗೆ ಜ್ಯೋತಿರಾವ್ ಫುಲೆ ಮತ್ತು ಬಿ. ಆರ್. ಅಂಬೇಡ್ಕರ್ ಅವರಂತಹ ಮಹಾನ್ ಚಿಂತಕರ ಚಿಂತನೆಗಳ ಹಿನ್ನೆಲೆಯಿರುವುದರಿಂದ ಮತ್ತು ಎರಡನೆಯದಾಗಿ ವಂಚಿತ ಜನಸಮುದಾಯಗಳ ರಾಜಕೀಯ ಶಕ್ತಿಯನ್ನು ಈ ಮಹಾನ್ ಚಿಂತಕರ ಬೌದ್ಧಿಕ ಹಿನ್ನೆಲೆಗೆ ಅನುಗುಣವಾಗಿ ರೂಪಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಂತಹ ರಾಜಕೀಯ ಶಕ್ತಿಗಳು ರಾಜಕೀಯ ಕೇಂದ್ರವಾಗುವುದರ ಲಾಭಗಳನ್ನು ಲೆಕ್ಕ ಹಾಕಬೇಕು. ಬೇರೊಂದು ಮಾತಿನಲ್ಲಿ ಹೇಳುವುದಾದರೆ ಸಮಾಜದ ಶ್ರೀಮಂತ ವರ್ಗಗಳಿಗೆ ಜ್ಯೋತಿರಾವ್ ಫುಲೆ ಅಥವಾ ಅಂಬೇಡ್ಕರ್ ಅವರ ಪರಿವರ್ತನಾವಾದಿ ರಾಜಕಾರಣದ ಬಗ್ಗೆ ಆಸಕ್ತಿ ಇರುವುದಿಲ್ಲ. ಹೀಗಾಗಿ ಅವರ ರಾಜಕೀಯ ಸಂಘಟನೆಯು ಶ್ರೀಮಂತವಾಗಿದ್ದರೂ ಚಿಂತನೆಯ ಪರಾಗಸ್ಪರ್ಶಕ್ಕೆ ಕಾಯಬೇಕಾಗುತ್ತದೆ. ಚುನಾವಣಾ ಲೆಕ್ಕಾಚಾರದಲ್ಲಿ ನೋಡುವುದಾದರೂ ಅಂಚಿನಲ್ಲಿರುವವರೂ ರಾಜಕೀಯ ಕೇಂದ್ರದತ್ತ ಸಾಗುವುದು ಈ ಕಾರಣಗಳಿಗಾಗಿ ಅನಿವಾರ್ಯವಾಗಿದೆ. ಆದರೂ ಈ ಪಕ್ಷಗಳು ಆಲೋಚನೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಮತ್ತು ರಾಜಕೀಯದಲ್ಲಿ ಪರಿವರ್ತನಾಶೀಲವಾಗಿರುವ ಅಂಚಿನ ಸಮುದಾಯಗಳಿಗೆ ಬಲಸಂಚಯ ಮಾಡುವುದೇ ಇಲ್ಲ. ಯಾಜಮಾನ್ಯ ಶಕ್ತಿಗಳು ತಮ್ಮ ವಿರುದ್ಧವಾದ ಪ್ರತಿ-ಯಾಜಮಾನ್ಯವನ್ನು ಸ್ಥಾಪಿಸಬಯಸುವ ಎಲ್ಲಾ ಪ್ರಯತ್ನಗಳನ್ನು ವಿರೋಧಿಸುತ್ತಾರೆ ಎಂಬುದು ನಿಜ. ಆದರೆ ಅದೇ ಸಮಯದಲ್ಲಿ ಈ ಪಕ್ಷಗಳು ಪ್ರಾಂತೀಯ ಮಟ್ಟದ ರಾಜಕಾರಣದಲ್ಲಿ ಉಳಿದುಕೊಳ್ಳುವುದರಲ್ಲೇ ಹೆಚ್ಚಿನ ಸಾರ್ಥೈಕ್ಯವನ್ನು ಕಂಡುಕೊಳ್ಳುತ್ತವೆಂಬುದೂ ಕೂಡಾ ಅಷ್ಟೇ ಸತ್ಯ. ಬಲಸಂಚಯ ಮಾಡುವ ಪ್ರಕ್ರಿಯೆಗಳು ವಂಚಿತ ಜನಸಮುದಾಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಅಥವಾ ಅಖಿಲ ಭಾರತ ಮಟ್ಟದಲ್ಲಿ ಸಂಘಟಿಸುತ್ತಾ ಲಂಬವಾಗಿರುವ ಏಣಿಯನ್ನು ಏರುವ ಪ್ರಯತ್ನಗಳನ್ನು ಒಳಗೊಂಡಿರುತ್ತದೆ. ಆದರೆ ಈ ವಂಚಿತ ಸಮುದಾಯಗಳನ್ನು ಸಂಘಟಿಸುವ ಪ್ರಕ್ರಿಯೆಯು ಇತರ ವಂಚಿತ ಸಮುದಾಯಗಳನ್ನು ಸಂಘಟಿಸುವಂತಹ ಸಮಾನಾಂತರ ದಾರಿಯನ್ನು ಹಿಡಿಯುತ್ತದೆ. ಆಗ ಅಂತಹ ನಾಯಕರ ಪ್ರಯತ್ನಗಳು ಒಂದು ಅಂಚಿನಿಂದ ಮತ್ತೊಂದು ಅಂಚಿನೆಡೆಗೆ ಪ್ರಯಾಣಿಸುತ್ತದೆ. ಇದು, ದೇಶದ ದಲಿತ ಮತ್ತು ಇತರ ಹಿಂದುಳಿದ ಜಾತಿಗಳ ರಾಜಕೀಯದಲ್ಲಿ ಅಂತರ್ ಗುಂಪುಗಳ ಮತ್ತು ಒಳಗುಂಪುಗಳ ಸಂಕುಚಿತ ರಾಜಕೀಯಗಳು ಪ್ರಸರಣಗೊಳ್ಳುತ್ತಿರುವುದರಲ್ಲಿ ಸ್ಪಷ್ಟವಾಗುತ್ತದೆ. ವಂಚಿತ ಸಮುದಾಯಗಳಿಗೆ ಸೀಮಿತವಾಗದಿರುವ ಸಂದರ್ಭವು ಹೊರಗಿನಿಂದ ಹೇರಲ್ಪಟ್ಟು ಒಳಗಿನಿಂದ ಶಾಶ್ವತಗೊಳಿಸಲಾಗುತ್ತಿರುವುದು ಕಂಡುಬರುತ್ತದೆ. ತಮ್ಮ ಯಾಜಮಾನ್ಯ ರಾಜಕಾರಣವನ್ನು ಯಶಸ್ವಿಯಾಗಿ ಹೇರುವ ಸಲುವಾಗಿ ಪಕ್ಷಗಳು ಅದನ್ನು ಹೊರಗಿನಿಂದ ಹೇರುತ್ತವೆ. ಈ ಹಿಂದೆಯೂ ಹಾಗೂ ಇಂದಿನ ಸಂದರ್ಭದಲ್ಲೂ ಯಾಜಮಾನ್ಯವನ್ನು ಮುಂದುವರಿಸಿಕೊಂಡು ಹೋಗಬೇಕಿರುವ ಆಳುವ ಪಕ್ಷಗಳ ಅಗತ್ಯಕ್ಕೆ ತಕ್ಕಂತೆ ಅಂಚಿನ ಪಕ್ಷಗಳ ಅಸ್ತಿತ್ವವನ್ನು ರೂಪಿಸಲಾಗಿರುತ್ತದೆ. ಅದೇ ರೀತಿ ಈ ಪಕ್ಷಗಳ ನಾಯಕರು ತಮ್ಮ ನಿರ್ದಿಷ್ಟ ಅನನ್ಯತೆಯ ಗುರುತಿಗೇ ಅಂಟಿಕೊಂಡು ತಮ್ಮನ್ನು ಹಾಗೂ ಅಂಚಿನ ಸಮುದಾಯವನ್ನು ಈ ಬಗೆಯ ಒಳಗೊಳ್ಳುವಿಕೆಗೆ ಸಿದ್ಧವಾಗಿಸುತ್ತಾರೆ. ಅಂತಹ ನಿರ್ದಿಷ್ಟ ಸಾಮಾಜಿಕ ಅನನ್ಯತೆಗಳ ಗುರುತನ್ನು ಮುಂದುವರಿಸುವುದಕ್ಕೆ ಈ ಪಕ್ಷಗಳು ಹಲವು ಕಾರಣಗಳನ್ನು ಕೊಡಬಹುದು. ಆದರೆ ಅವು ಶಬ್ದಾಡಂಬರಗಳಲ್ಲಿ ವಿಶ್ವಾತ್ಮಕವಾಗಿ ಕಂಡರೂ ಸಾರದಲ್ಲಿ ವಿಶ್ವಾತ್ಮಕ ಆಶಯಗಳನ್ನೇನೂ ಒಳಗೊಂಡಿರುವುದಿಲ್ಲ. ಇದು ಯಾಜಮಾನ್ಯದ ತರ್ಕ ಸರಣಿಯಲ್ಲಿ ಸಣ್ಣಸಣ್ಣ ಗುಂಪುಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುವ ಕಾರಣಗಳನ್ನು ವಿವರಿಸುತ್ತದೆ. ಯಾಜಮಾನ್ಯಕ್ಕೆ ತೋರಿಕೆಯಲ್ಲಾದರೂ ಅಥವಾ ಪಾಕ್ಷಿಕವಾಗಿಯಾದರೂ ಅಂತಹ ಪಕ್ಷಗಳ ಸದಸ್ಯರನ್ನು ಒಳಗೊಳ್ಳುವ ಸಾಮರ್ಥ್ಯವಿರಬೇಕಾಗುತ್ತದೆ. ಮೇಲಾಗಿ ಚುನಾವಣಾ ಪ್ರಜಾತಂತ್ರದ ಮೂಲಕ ಪ್ರವಹಿಸುವ ಯಾಜಮಾನ್ಯವು ಅಂಚಿನಿಂದ ಹುಟ್ಟಿಬರುವ ಎಲ್ಲಾ ಧ್ವನಿಗಳನ್ನೂ ತನ್ನ ಶಮನಕಾರಿ ತರ್ಕದಲ್ಲಿ ಜೀರ್ಣಿಸಿಕೊಂಡುಬಿಡುತ್ತದೆ. ಆದರೆ ಈ ಅಂಚಿನ ಪಕ್ಷಗಳು ಚಿಂತನೆ ಮತ್ತು ವಂಚಿತರ ಸಂಖ್ಯಾ ಪ್ರಮಾಣದಲ್ಲಿ ಸಾಕಷ್ಟು ಶಕ್ತಿಯನ್ನು ಹೊಂದಿದ್ದರೂ ರಾಜಕಿಯ ಕೇಂದ್ರದ ಕಡೆ ಚಲಿಸಲು ಸಾಧ್ಯವಾಗದಿರುವುದು ಒಂದು ವಿಪರ್ಯಾಸವೇ ಸರಿ. ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News