ಮಡಿಕೇರಿಯಲ್ಲಿ ಮಳೆ ಶಾಂತ: ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಭಾರೀ ವರ್ಷಧಾರೆ

Update: 2019-09-06 18:10 GMT

ಮಡಿಕೇರಿ, ಸೆ.6: ಕಳೆದ ನಾಲ್ಕು ದಿನಗಳಿಂದ ಕೊಡಗಿನಾದ್ಯಂತ ಮತ್ತೆ ಪ್ರವಾಹದ ಆತಂಕ ಸೃಷ್ಟಿಸಿದ್ದ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಮಳೆ ಶಾಂತವಾಗಿದ್ದರೆ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.

ದಕ್ಷಿಣ ಕೊಡಗಿನ ಭಾಗಗಳಲ್ಲಿ ಭಾರೀ ಮಳೆಯಿಂದ ಲಕ್ಷ್ಮಣತೀರ್ಥ ಮತ್ತು ಕೇರಳದತ್ತ ಸಾಗುವ ಬರಪ್ಪೊಳೆ ಉಕ್ಕಿ ಹರಿಯುತ್ತಿದ್ದು ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಡಿಕೇರಿಯಲ್ಲಿ ಶುಕ್ರವಾರ ತಿಳಿ ಬಿಸಿಲಿನ ವಾತಾವರಣ ಕಂಡು ಬಂದಿತ್ತಾದರೂ ಸೋಮವಾರಪೇಟೆಯಲ್ಲಿ ಬಿಸಿಲು ಕಾಣದೆ ವಾರವೇ ಕಳೆದಿದೆ.

ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 4 ಇಂಚು ಮಳೆ ದಾಖಲಾಗಿದೆ. ಶುಕ್ರವಾರ ಮಳೆಯ ತೀವ್ರತೆ ಇಳಿಮುಖಗೊಂಡು ಮಡಿಕೇರಿ ರಸ್ತೆಯ ಮೇಲೆ ಹರಿಯುತ್ತಿದ್ದ ಪ್ರವಾಹದ ನೀರು ಇಳಿದು ಸಂಚಾರ ಪುನರಾರಂಭಗೊಂಡಿದೆ. ನಾಪೋಕ್ಲು ರಸ್ತೆಯಲ್ಲಿ ಪ್ರವಾಹದ ನೀರು ಇನ್ನಷ್ಟೆ ಇಳಿಯಬೇಕಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನವರೆಗೆ ಒಂದು ಇಂಚು ಮಳೆ ದಾಖಲಾಗಿದ್ದರೆ, ಕಾವೇರಿ ನದಿ ಪಾತ್ರದ ನಾಪೋಕ್ಲು, ಮೂರ್ನಾಡು ಬಲಮುರಿ, ಸಿದ್ದಾಪುರ ವಿಭಾಗಗಲ್ಲಿ ಅಲ್ಪಸ್ವಲ್ಪ ಮಳೆಯಷ್ಟೆ ಆಗುತ್ತಿರುವ ಬಗ್ಗೆ ವರದಿಯಾಗಿದೆ.

ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪ, ಪೊನ್ನಂಪೇಟೆಗಳಲ್ಲಿ ಮಳೆ ಕ್ಷೀಣಿಸಿದ್ದರೆ, ಬಾಳೆಲೆ, ಹುದಿಕೇರಿ, ಶ್ರೀಮಂಗಲ ವಿಭಾಗಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ಲಕ್ಷ್ಮಣ ತೀರ್ಥ ನದಿಯ ನೀರಿನ ಮಟ್ಟ ಹೆಚ್ಚುತ್ತಿದ್ದು, ಗದ್ದೆ ಬಯಲುಗಳು ಪ್ರವಾಹದಿಂದ ಆವೃತ್ತವಾಗಿದೆ. ಬರಪ್ಪೊಳೆಯಲ್ಲೂ ನೀರು ಉಕ್ಕಿ ಹರಿಯುತ್ತಿದೆ. ಸಿದ್ದಾಪುರದ ಕರಡಿಗೋಡು ವ್ಯಾಪ್ತಿಯ ರಸ್ತೆಗಳು ಜಲಾವೃತಗೊಂಡಿವೆ.

ಸೋಮವಾರಪೇಟೆಯ ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ ವಿಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News