ಬಿಎಸ್‌ವೈಗೆ ಆಗುತ್ತಿರುವ ಕಿರುಕುಳ ತಪ್ಪಿಸಿ: ಬಿಜೆಪಿ ಶಾಸಕ ಯತ್ನಾಳ್

Update: 2019-09-08 14:18 GMT

ವಿಜಯಪುರ, ಸೆ. 8: ನನಗೆ ಸಚಿವ ಸ್ಥಾನ ನೀಡಿದೆ ಇದ್ದರೂ ಅಸಮಾಧಾನವಿಲ್ಲ. ಆದರೆ, ಅಭಿವೃದ್ದಿಯ ಕನಸನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಿ, ಎಲ್ಲ ಶಾಸಕರು ಅವರಿಗೆ ಸಹಕಾರ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದು, ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಅನರ್ಹ ಶಾಸಕರಿಂದಲೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಎಂದರು.

ಕಾಂಗ್ರೆಸ್-ಜೆಡಿಎಸ್‌ನ ಅನರ್ಹ ಶಾಸಕರು ಸಾಕಷ್ಟು ನೊಂದಿದ್ದು, ಅವರು ರಾಜೀನಾಮೆ ನೀಡಿದ ಮೇಲೆ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ. ಅಲ್ಲದೆ, ಅನರ್ಹ ಶಾಸಕರು ಸಚಿವರಾಗಲಿ ಎಂದು ಯತ್ನಾಳ್ ಆಶಯ ವ್ಯಕ್ತಪಡಿಸಿದರು.

ಪಕ್ಷದಲ್ಲಿ ಅನ್ಯಾಯವಾದಾಗ ನಾನು ಧ್ವನಿ ಎತ್ತುತ್ತೇನೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಪಕ್ಷ ಅಥವಾ ಯಾರೇ ಇದ್ದರೂ ಸಹಿಸುವುದಿಲ್ಲ ಎಂದ ಯತ್ನಾಳ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಂತ್ರಸ್ತರ ಕುರಿತು ನೀಡಿದ ‘ನಿಮಗೆ 10 ಸಾವಿರ ರೂ.ಕೊಟ್ಟಿದ್ದೇ ಜಾಸ್ತಿಯಾಯಿತು’ ಎಂಬ ಹೇಳಿಕೆಗೆ ನನ್ನನ್ನು ಬಲಿಪಶು ಮಾಡಬೇಡಿ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News