ಚಾಮುಂಡಿ ಬೆಟ್ಟದ ಫುಟ್ಪಾತ್ ವ್ಯಾಪಾರಿಗಳ ತಕ್ಷಣ ತೆರವಿಗೆ ಸಚಿವ ವಿ.ಸೋಮಣ್ಣ ಸೂಚನೆ

Update: 2019-09-10 07:02 GMT

ಮೈಸೂರು, ಸೆ.10: ಚಾಮುಂಡಿ ಬೆಟ್ಟದ ಫುಟ್ಪಾತ್ ವ್ಯಾಪಾರಿಗಳನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ವಸತಿ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ವಿ.ಸೋಮಣ್ಣ ಖಡಕ್ ಸೂಚನೆ ನೀಡಿದ್ದಾರೆ.

ಅರಮನೆ ಆವರಣದಲ್ಲಿ ಅರಮನೆ ಮಂಡಳಿ ವತಿಯಿಂದ ಮಂಗಳವಾರ  ದಸರಾದಲ್ಲಿ ಭಾಗವಹಿಸಿರುವ ಮಾವುತರು ಮತ್ತು ಕಾವಾಡಿಗಳ ಕುಟುಂಬದವರಿಗೆ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಉಪಹಾರ ಬಡಿಸಿ ನಂತರ ನಡೆದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.

ಚಾಮುಂಡಿ ಬೆಟ್ಟದಲ್ಲಿ ರಸ್ತೆ ಪಕ್ಕದಲ್ಲೇ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವುದರಿಂದ ಅಲ್ಲಿಗೆ ಬರುವ ಭಕ್ತಾಧಿಗಳಿಗೆ ತೊಂದರೆ ಉಂಟಾಗುತ್ತಿದೆ. ಜೊತೆಗೆ ರಸ್ತಯನ್ನೆಲ್ಲಾ ಅತಿಕ್ರಮಿಸಿಕೊಂಡು ಸುಂದರ ವಾತಾವರಣ ಹಾಳಾಗಿದೆ. ಭಕ್ತಾಧಿಗಳ ಅನುಕೂಲಕ್ಕೆ ತೊಂದರೆಯಾಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಿದೆ. ಆದ್ದರಿಂದ ಅಲ್ಲಿನ ವ್ಯಾಪಾರಸ್ಥರನ್ನು ಕೂಡಲೇ ತರವುಗೊಳಿಸಿ ಎಂದು ಡಿಸಿಪಿ ಮುತ್ತುರಾಜ್ ಅವರಿಗೆ ಸಚಿವರು ಸೂಚಿಸಿದರು.

ಇನ್ನು ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳ ಕುರಿತು ಪಾಲಿಕೆ ಆಯಕ್ತರಿಗೆ ಸೂಚನೆ ನೀಡಿದರು.

ಹಾಡಿಗಳ ಜನರು ವಿದ್ಯುತ್ ನಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಕೈಗೊಳ್ಳುವಂತೆ ಚೆಸ್ಕಾಂ ಧಿಕಾರಿಗಳಿಗೆ ಸೂಚಿಸಿದರು.

ಹಾಡಿಗಳಲ್ಲದೆ ಗ್ರಾಮೀಣ ಪ್ರದೇಶದ ಹಲವು ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇಲ್ಲದ ಬಗ್ಗೆ ಮಾಧ್ಯಮದವರು ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ದಸರಾ ಮುಂಚಿತವಾಗಿ ಜಿಲ್ಲಾಮಟ್ಟದ ಕೆಡಿಪಿ ಸಭೆ ನಡೆಸಿ ಇಂತಹ ಅವ್ಯವಸ್ಥೆಗಳ ಬಗ್ಗೆ ಗಮನಹರಿಸಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆಯವರು ಆನೆಗಳ ಸುಗಮ ಸಂಚಾರಕ್ಕೆ ಪೊಲೀಸರೊಡಗೂಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ಇದಕ್ಕೂ ಮುಂಚೆ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ದಸರಾ ದರ್ಶನದಲ್ಲಿ ಭಾಗವಹಿಸುವರ ಬಳಿ 50 ರೂ. ಪಡೆಯಲಾಗುತಿತ್ತು. ಇದರಿಂದ 5.40 ಲಕ್ಷ ರೂ. ಖರ್ಚಾಗುತಿತ್ತು. ಆ ಹಣವನ್ನು ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ನೀಡುವುದಾಗಿ ಸೋಮಣ್ಣ ಅವರ ಪತ್ನಿ ಶೈಲಜಾ ಸೋಮಣ್ಣ ಅಪರ ಜಿಲ್ಲಾಧಿಕಾರಿಗೆ ಚೆಕ್ ನೀಡಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್‌. ನಾಗೇಂದ್ರ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಮೇಯರ್ ಪುಷ್ಪಲತಾ ಜಗನ್ನಾಥ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್ಪಿ ರಿಷ್ಯಂತ್, ಜಿಪಂ ಸಿಇಓ ಕೆ.ಜ್ಯೋತಿ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಮಂಜುನಾಥ್, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ಬಿಜೆಪಿ ಮುಖಂಡರಾದ ಎಸ್.ಮಹದೇವಯ್ಯ, ದೇವನೂರು ಜಿ. ಪ್ರತಾಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News