ಸಸಿಕಾಂತ್ ಸೆಂಥಿಲ್ ರಾಜೀನಾಮೆ 'ರಾಜದ್ರೋಹ, ಸರಕಾರ ದ್ರೋಹ': ಅನಂತಕುಮಾರ ಹೆಗಡೆ

Update: 2019-09-10 17:41 GMT

ಬೆಂಗಳೂರು, ಸೆ.10: ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿರುವುದು ಸಣ್ಣ ವಿಷಯ ಎಂದು ಭಾವಿಸಬಾರದು. ಇದೊಂದು ರಾಜದ್ರೋಹ ಎಂದು ಸಂಸದ ಅನಂತಕುಮಾರ ಹೆಗಡೆ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾತ್ರಿ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಿರುವ ಅವರು, "ಸಸಿಕಾಂತ್ ಸೆಂಥಿಲ್, ದ.ಕ ಜಿಲ್ಲಾಧಿಕಾರಿ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿರುವುದು ಸಣ್ಣ ವಿಷಯ ಎಂದು ಭಾವಿಸಬಾರದು. ಇದೊಂದು ರಾಜದ್ರೋಹ. ಭಾರತೀಯ ಆಡಳಿತ ಸೇವೆಯ ಒಬ್ಬ ಅಧಿಕಾರಿ, ಕೇಂದ್ರ ಸರಕಾರ ಬಹುಮತದ ಆಧಾರದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವ ದುಃಸ್ಸಾಹಸಕ್ಕೆ ಕೈಹಾಕಿದ್ದು, ಇದಕ್ಕಿಂತ ದೊಡ್ಡ ಸರಕಾರ ದ್ರೋಹ ಮತ್ತೊಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು. ರಾಜ್ಯಪಾಲರಿಗೆ ಸಂಪೂರ್ಣವಾದ ಅಧಿಕಾರವಿದೆ. ಜನ ಕೂಡ ಇದನ್ನೇ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

'ಅತಿಯಾದ ಸ್ವಚ್ಛಂದತೆಯನ್ನು ನಾನು ಸ್ವಾತಂತ್ರ್ಯ ಎಂದು ಭಾವಿಸುವುದಿಲ್ಲ. ಸ್ವಾತಂತ್ರ್ಯದ ಹೆಸರಿನ ಸ್ವೇಚ್ಛಾಚಾರ ಈ ರೀತಿಯ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಇಂತಹ ರೀತಿಯ ದುಷ್ಕೃತ್ಯ ನಡೆದಿರುವುದರ ಕಾರಣವನ್ನು ಬಯಲಿಗೆಳೆಯಬೇಕು. ಇದರ ಹಿಂದಿರುವ ಕಾಣದ ಕೈವಾಡವೇನಿದೆ ಎಂಬುದನ್ನು ಜನರ ಮುಂದಿಡಬೇಕು. ಇದು ರಾಜದ್ರೋಹ, ಸರಕಾರ ದ್ರೋಹ. ಖಂಡಿತವಾಗಿ ಇದು ಅಕ್ಷಮ್ಯ ಅಪರಾಧ’ ಎಂದು ಅವರು ಹೇಳಿದ್ದಾರೆ.

ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಆಡಳಿತ ಸೇವೆಯಲ್ಲಿರುವ ಅಧಿಕಾರಿ ಪ್ರಶ್ನಿಸಲು ಸಾಧ್ಯವೇ ಇಲ್ಲ, ಮಾಡಲೂಬಾರದು. ಇದು ಸಂವಿಧಾನ ವಿರೋಧಿ. ಬಹುಮತದ ಆಧಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸುವುದು ಅವನ ದುರಹಂಕಾರ, ಅಸಭ್ಯತೆ’. ಇದನ್ನು ಸಾರ್ವಜನಿಕರು ಖಂಡಿಸಬೇಕು ಎಂದು ಅನಂತಕುಮಾರ ಹೆಗಡೆ ಏಕವಚನದಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News