ಪರಿಹಾರ ನೀಡಲು ತಾರತಮ್ಯ: ನೆರೆ ಸಂತ್ರಸ್ತರಿಂದ ತಹಶೀಲ್ದಾರ್ ಕಾರಿಗೆ ಮುತ್ತಿಗೆ

Update: 2019-09-10 17:06 GMT

ಬಾಗಲಕೋಟೆ, ಸೆ.10: ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಹಾಗೂ ಅಗತ್ಯವಿರುವಷ್ಟು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಲ್ಲ ಎಂದು ಆರೋಪಿಸಿ ಬಾದಾಮಿ ತಾಲೂಕಿನ ಬೀರನೂರಿನ ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರು ಮಂಗಳವಾರ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾತ್ಕಾಲಿಕ ಶೆಡ್ ಎಂದು ಕಾಟಾಚಾರಕ್ಕೆ ತಗಡುಗಳ ಕಟ್ಟಲಾಗಿದೆ. ನೆಲಹಾಸು, ಶೌಚಾಲಯ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕಬೇಕಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಇನ್ನೂ 61 ಕುಟುಂಬಗಳಿಗೆ ವಸತಿ ವ್ಯವಸ್ಥೆ ಇಲ್ಲ. ಈಗಲೂ ರಸ್ತೆ ಬದಿ ಗುಡಾರ ಹಾಕಿಕೊಂಡು ಬದುಕುತ್ತಿದ್ದಾರೆ. ಅವರಿಗೆ ವಸತಿ ವ್ಯವಸ್ಥೆ ಮಾಡುವಂತೆ ಕೋರಿದರೂ ತಾಲೂಕು ಆಡಳಿತ ಅದಕ್ಕೆ ಸ್ಪಂದಿಸಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ತಹಶೀಲ್ದಾರ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಆದರೂ ಸಂತ್ರಸ್ತರ ಆಕ್ರೋಶದ ಬಿಸಿಗೆ ತಹಶೀಲ್ದಾರ್ ಕಾರು ಮುಂದಕ್ಕೆ ಹೋಗಲು ಅರ್ಧಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News