ಸಾವಿರ ಕೋಟಿ ರೂ. ವ್ಯವಹಾರ ಗುರಿ: ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ

Update: 2019-09-12 18:00 GMT

ಕೋಲಾರ, ಸೆ.12: ಡಿಸಿಸಿ ಬ್ಯಾಂಕ್ 6 ವರ್ಷಗಳ ಹಿಂದೆ 47.21 ಕೋಟಿ ರೂ ಇದ್ದ ಕ್ರೋಢೀಕೃತ ನಷ್ಟವನ್ನು ತುಂಬಿಕೊಂಡು 40.92 ಕೋಟಿ ರೂ ಲಾಭ ಗಳಿಸಿದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಗುರುವಾರ ನಗರದ ಹಾಲಿಸ್ಟರ್ ಭವನದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ 2018-19ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಮತ್ತು ಮಹಿಳಾ ಸಂಘಗಳಲ್ಲಿ 1 ಸಾವಿರ ಕೋಟಿ ರೂ ಸಾಲ ಕೊಡುವ ಗುರಿಯನ್ನು ಹೊಂದಿದ್ದು, ನಬಾರ್ಡ್‍ನಿಂದ 71 ಕೋಟಿ ರೂ ಮತ್ತು ಅಪೇಕ್ಸ್ ಬ್ಯಾಂಕಿನಿಂದ 14 ಕೋಟಿ ರೂ ಮಾತ್ರ ಸಾಲ ಸಿಕ್ಕಿದ್ದು ಉಳಿದ ಸಾಲದ ಮೊತ್ತವನ್ನು ಡಿಸಿಸಿ ಬ್ಯಾಂಕ್ ತನ್ನ ಠೇವಣಿ ಹಣದಿಂದ ಭರಿಸಲಿದೆ ಎಂದರು. 

ಸಾಲಮನ್ನಾದಿಂದ 326 ಕೋಟಿ ರೂ. ಲಾಭ: ಬ್ಯಾಂಕ್ ಸದೃಢವಾಗಿದ್ದ ಕಾರಣ ಈ ಬಾರಿ ಅವಿಭಜಿತ ಜಿಲ್ಲೆಯ ರೈತರಿಗೆ ಸರ್ಕಾರಗಳ ಸಾಲ ಮನ್ನಾ ಯೋಜನೆಯಿಂದ 326 ಕೋಟಿ ರೂ. ಲಾಭವಾಗಿದೆ ಎಂದ ಅವರು, 6 ವರ್ಷಗಳ ಹಿಂದೆ ಬ್ಯಾಂಕ್ ನಷ್ಟದಲ್ಲಿದ್ದ ಕಾರಣ ಸರ್ಕಾರದ ಬಡ್ಡಿ, ಸಾಲ ಮನ್ನಾ ಯೋಜನೆಗಳು ಜಿಲ್ಲೆಯ ರೈತರಿಗೆ ಸಿಕ್ಕಿರಲಿಲ್ಲ ಎಂಬುದನ್ನು ಸ್ಮರಿಸಿದರು.

ಕಳೆದ 6 ವರ್ಷಗಳ ಹಿಂದೆ ಇದ್ದ 47.21 ಕೋಟಿ ಕ್ರೋಡೀಕೃತ ನಷ್ಟ ತುಂಬಿದ್ದಲ್ಲದೇ 40.92 ಲಕ್ಷ ರೂ ಲಾಭ ಗಳಿಸುವಂತೆ ಮಾಡಲಾಗಿದೆ. ಬ್ಯಾಂಕ್ ದಿವಾಳಿಯಾಗಿ ಠೇವಣಿ ಹಣವನ್ನು ಹಿಂತಿರುಗಿಸಲಾಗದ ಸ್ಥಿತಿಯಲ್ಲಿದ್ದ ಬ್ಯಾಂಕನ್ನು ಮುಚ್ಚಿ ಬೆಂಗಳೂರು ಡಿಸಿಸಿ ಬ್ಯಾಂಕಿನೊಂದಿಗೆ ವಿಲೀನ ಮಾಡುವ ಹುನ್ನಾರೂ ನಡೆದಿತ್ತು ಎಂದರು.

ಬ್ಯಾಂಕಿನ ವ್ಯಾಪ್ತಿಯಲ್ಲಿ 200 ಸೊಸೈಟಿಗಳಿದ್ದು ತಲಾ ಒಂದು ಕೋಟಿ ಠೇವಣಿ ಸಂಗ್ರಹ ಮಾಡಿದರೆ ಡಿಸಿಸಿ ಬ್ಯಾಂಕ್ ಒಂದು ಸಾವಿರ ಕೋಟಿವರೆಗೆ ವ್ಯವಹಾರ ಮಾಡುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ ಎಂದರು.

ಬ್ಯಾಂಕ್‍ಗಳು ನಂಬಿಕೆಯನ್ನು ಉಳಿಸಿ ಕೊಳ್ಳುವ ಕೆಲಸ ಮಾಡಬೇಕು. ಬಡ ರೈತರಿಗೆ ಮಹಿಳೆಯರಿಗೆ ಸಹಾಯ ಮಾಡುವ ಕೆಲಸ ಮಾಡಬೇಕು. ನಿಮ್ಮಲ್ಲಿರುವ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುವಂತಾಗಬೇಕು. ನಮ್ಮದು ಬಡವರ ಬಗ್ಗೆ ಕಾಳಜಿ ಹೊಂದಿರುವ ಬ್ಯಾಂಕ್ ಅಗಿದೆ. ನಮ್ಮ ಬ್ಯಾಂಕಿನಲ್ಲಿ ಯಾವೂದೇ ರಾಜಕೀಯಕ್ಕೆ ಅವಕಾಶವಿಲ್ಲ ಎಂದರು.

ಮಹಿಳಾ ಸಂಘಗಳಿಗೆ ಬ್ಯಾಂಕ್ ವಿತರಿಸಿರುವ ಶೂನ್ಯ ಬಡ್ಡಿ ಸಾಲಕ್ಕೆ ಸರ್ಕಾರದಿಂದ ಇನ್ನೂ ಬಡ್ಡಿ ಹಣ ಬಿಡುಗಡೆಯಾಗದಿದ್ದರೂ, ಸೊಸೈಟಿಗಳ ಆರ್ಥಿಕ ಸದೃಢತೆಯ ಹಿತದೃಷ್ಟಿಯಿಂದ ಶೇ.2 ಮಾರ್ಜಿನ್ ಬಡ್ಡಿ 7.60 ಕೋಟಿ ರೂ. ಗಳನ್ನು ನಿಮ್ಮ ಸೊಸೈಟಿ ಖಾತೆಗೆ ಜಮೆ ಮಾಡಲಾಗುವುದು. ಅದರೆ ಇದನ್ನು ಬಳಿಸಿಕೊಳ್ಳುವಂತಿಲ್ಲ ಎಂದು ವಿವರಿಸಿದರು.

5 ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ 
ಬ್ಯಾಂಕಿನಿಂದ ಈವರೆಗೆ ಸುಮಾರು 4 ರಿಂದ 5 ಲಕ್ಕ ಹೆಣ್ಣು ಮಕ್ಕಳಿಗೆ ಸಾಲ ವಿತರಿಸಲಾಗಿದೆ. ಈ ಪೈಕಿ ಶೇ 75ರಷ್ಟು ಮೀಸಲಾತಿ ಹೊಂದಿರುವ ಹೆಣ್ಣು ಮಕ್ಕಳಿಗೆ ಸಾಲ ನೀಡಿದೆ. ಸೇ 99 ರಷ್ಟು ಹೆಣ್ಣು ಮಕ್ಕಳು ಸಾಲವನ್ನು ಮರುಪಾವತಿಸಿ ಬ್ಯಾಂಕಿನ ನಂಬಿಕೆ ಗಟ್ಟಿಗೊಳಿಸಿದ್ದಾರೆ ಎಂದರು. ಆದರೆ ಕೆಲವು ಕಡೆ ಮಧ್ಯವರ್ತಿಗಳಿಂದ ಸಂಘಗಳಿಗೆ ಕೆಟ್ಟ ಹೆಸರು ಬರುವಂತಾಗಿದೆ. ಬ್ಯಾಂಕ್ ದೇವಾಲಯ ಇದ್ದಂತೆ, ಗ್ರಾಹಕರೇ ನಮಗೆ ದೇವರುಗಳು, ನಾವು ಅವರ ಸೇವಕರು ಮಾತ್ರ ಎಂದು ಭಾವುಕರಾಗಿ ನುಡಿದರು. 

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್. ಅನಿಲ್ ಕುಮಾರ್, ಎಂ.ಸಿ.ನೀಲಕಂಠೇಗೌಡ, ಕೆ.ವಿ.ದಯಾನಂದ್, ಹನುಮಂತರೆಡ್ಡಿ,ಆರ್.ನಾರಾಯಣರೆಡ್ಡಿ, ಹೆಚ್.ನರಸಿಂಹರೆಡ್ಡಿ, ಎಂ.ಗೋವಿಂದರಾಜುಲು, ಕೆ.ಎಚ್.ಚನ್ನರಾಯಪ್ಪ, ಸೊಣ್ಣೆಗೌಡ,ಬಿ.ವಿ.ವೆಂಕಟರೆಡ್ಡಿ, ಎನ್.ನಾಗಿಗೆಡ್ಡಿ, ಸಿ.ಕೆ.ವೇದಾ, ವಿ.ವೆಂಕಟಶಿವಾರೆಡ್ಡಿ, ಕೆ.ಎಸ್.ದ್ಯಾವಪ್ಪ ಸೇರಿ ಅನೇಕರು ಉಪಸ್ಥಿತರಿದ್ದರು. 

ಶಿವಕುಮಾರ್ ನಿರೂಪಿಸಿ, ವಾರ್ಷಿಕ ವರದಿ ವಾಚಿಸಿದರು. ವ್ಯವಸ್ಥಾಪಕ ನಿರ್ದೇಶಕ ರವಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News