ದೇವಮಚ್ಚಿ ಮೀಸಲು ಅರಣ್ಯ ನಾಗರಹೊಳೆ ವ್ಯಾಪ್ತಿಗೆ: ಪ್ರಸ್ತಾಪ ವಿರೋಧಿಸಿ ಮುಖ್ಯಮಂತ್ರಿಗೆ ಮನವಿ

Update: 2019-09-13 18:17 GMT

ಮಡಿಕೇರಿ, ಸೆ.13: ವೀರಾಜಪೇಟೆ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶವನ್ನು ಏಕಾಏಕಿ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದೊಂದಿಗೆ ವಿಲೀನಗೊಳಿಸುವ ಪ್ರಸ್ತಾಪಕ್ಕೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ್ದಾರೆ.

ವೀರಾಜಪೇಟೆ ತಾಲೂಕಿನ ತಿತಿಮತಿ, ದೇವರಪುರ, ಚೆನ್ನಯ್ಯನಕೋಟೆ ಮತ್ತು ಮಾಲ್ದಾರೆ ವ್ಯಾಪ್ತಿಯಲ್ಲಿ ದೇವಮಚ್ಚಿ ಅರಣ್ಯ ಪ್ರದೇಶ (ರಿಸರ್ವ್ ಫಾರೆಸ್ಟ್)ವಿದ್ದು, ಈ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬಹುತೇಕ ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಅರಣ್ಯ ವಾಸಿಗಳು ವಾಸವಿದ್ದಾರೆ. ಅಲ್ಲದೆ ಈ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಅನೇಕರು ಖಾಸಗಿ ಜಮೀನನ್ನು ಹೊಂದಿದ್ದಾರೆ. ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಎರಡು ಸಾವಿರಕ್ಕೂ ಹೆಚ್ಚು ಕುಟುಂಬದ ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರ ನೀಡಲಾಗಿದೆ. ಅಲ್ಲದೆ 1978ಕ್ಕೆ ಮೊದಲು ವಾಸವಿರುವ ಇತರ ಜನಾಂಗಕ್ಕೂ ಕೇಂದ್ರ ಸರ್ಕಾರದ  ಅಧಿಸೂಚನೆಯಂತೆ ಹಕ್ಕು ಪತ್ರ ನೀಡಲಾಗಿದೆ ಎಂದು ಬೋಪಯ್ಯ ಅವರು ತಮ್ಮ ಮನವಿಯಲ್ಲಿ ಗಮನಸೆಳೆದಿದ್ದಾರೆ.

ಈ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂಡ್ಲೂರು ಎಂಬ ಗ್ರಾಮದಲ್ಲಿ 1967ನೇ ಇಸವಿಗೆ ಮೊದಲೇ ನಾಗರಹೊಳೆ ಅಭಯಾರಣ್ಯದ ಮಧ್ಯದಲ್ಲಿ ಹಕ್ಕುಪತ್ರ ಸಮೇತ ವಾಸವಿದ್ದ 300ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿ ಪ್ರತಿಯೊಬ್ಬರಿಗೂ ತಲಾ 2 ಎಕರೆಯ ಜಮೀನು ನೀಡಲಾಗಿದ್ದು, ಇವರೆಲ್ಲರೂ ದೇವಮಚ್ಚಿ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದಾರೆ. ಈ ಹಿಂದೆಯೂ ಕೂಡ ಪರಿಶಿಷ್ಟ ಪಂಗಡದವರು ಹಕ್ಕುಪತ್ರ ಕೋರಿ ಮಹಿಳೆಯರು ಬೆತ್ತಲೆ ಮೆರವಣಿಗೆ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಆದರೆ ಗ್ರಾಮಸಭೆಯ ಗಮನಕ್ಕೂ ತರದೆ, ಅರಣ್ಯ ಕಾಯ್ದೆ, ಫಾರೆಸ್ಟ್ ಮ್ಯಾನ್ಯುವಲ್ ನಿಯಮಗಳು ಸೇರಿದಂತೆ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ಅರಣ್ಯ ಇಲಾಖೆಯವರು ಇಡೀ ಪ್ರದೇಶವನ್ನು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಗೆ ಸೇರಿಸಿರುವುದರೊಂದಿಗೆ ಇಲ್ಲಿ ವಾಸಿಸುತ್ತಿರುವ ಜನರಿಗೆ ಈಗಾಗಲೇ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ವಿವರಿಸಿದರು.

ಅರಣ್ಯ ಅಧಿಕಾರಿಗಳ ಈ ಸರ್ವಾಧಿಕಾರಿ ಧೋರಣೆಯಿಂದ ಈ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಶಾಂತಿಯ ವಾತಾವರಣ ಉಂಟಾಗಲಿದ್ದು, ಪರಿಶಿಷ್ಟ ಪಂಗಡ ಹಾಗೂ ಇತರ ಜನಾಂಗದವರು ಚಳುವಳಿಯ ಹಾದಿಯನ್ನು ಹಿಡಿಯುವ ಮುನ್ಸೂಚನೆ ಇದೆ. ಅರಣ್ಯ ಅಧಿಕಾರಿಗಳ ಈ ಸರ್ವಾಧಿಕಾರ ಧೋರಣೆಯನ್ನು ಖಂಡಿಸಿ ಇಲ್ಲಿನ ಗ್ರಾಮ ಪಂಚಾಯತ್ ಗಳು ಅಧಿಸೂಚನೆಯನ್ನು ಹಿಂಪಡೆಯಲು ಪಂಚಾಯತ್ ವಿಶೇಷ ಸಭೆಯಲ್ಲಿ ನಿರ್ಣಯ ಮಾಡಿವೆ. ಆದುದರಿಂದ ದೇವಮಚ್ಚಿ ಅರಣ್ಯ ಪ್ರದೇಶವನ್ನು ನಾಗರಹೊಳೆ ಅಭಯಾರಣ್ಯಕ್ಕೆ ಸೇರಿಸಿರುವದನ್ನು ಹಿಂಪಡೆದು ಯಥಾಸ್ಥಿತಿ ಕಾಪಾಡಬೇಕು ಎಂದು ಬೋಪಯ್ಯ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿಗಳ ಭೇಟಿಯ ಸಂದರ್ಭ ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷ  ಬಿ.ಎ. ಹರೀಶ್, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ  ನೆಲ್ಲಚಂಡ ಕಿರಣ್ ಕಾರ್ಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News