ಶಿವಮೊಗ್ಗ: ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ

Update: 2019-09-15 16:41 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಸೆ. 15: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪ ಗ್ರಾಮದಲ್ಲಿ ಮನೆಯೊಂದರ ಕಾಂಪೌಂಡ್ ಒಳಗಿದ್ದ ಡ್ಯಾಶ್‍ಹ್ಯಾಂಡ್ ತಳಿಯ ನಾಯಿಯನ್ನು ಚಿರತೆಯೊಂದು ಹೊತ್ತೊಯ್ದಿರುವ ಘಟನೆ ವರದಿಯಾಗಿದೆ. 

ರಘುನಾಥ್ ಎಂಬುವರ ಮನೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಚಿರತೆಯು ನಾಯಿಯನ್ನು ಹೊತ್ತೊಯ್ಯುತ್ತಿರುವ ಘಟನಾವಳಿಯು ಮನೆಯ ಹೊರಾಂಗಣದಲ್ಲಿ ಅಳವಡಿಸಿದ್ದ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. 

ಮನೆಯ ಮುಂಭಾಗದ ಸುಮಾರು 5 ಅಡಿ ಎತ್ತರದ ಕಾಂಪೌಂಡ್ ಹಾರಿ ನಾಯಿಯನ್ನು ಹೊತ್ತೊಯ್ದಿದೆ. ಈ ಭಾಗದಲ್ಲಿ ಚಿರತೆಯ ಹಾವಳಿ ಹೆಚ್ಚಿದೆ. ನಾಗರಿಕರು ಆತಂಕದಲ್ಲಿ ಓಡಾಡುವಂತಹ ಸ್ಥಿತಿಯಿದೆ. ಇದೀಗ ಮನೆಯೊಂದರ ಆವರಣದಲ್ಲಿದ್ದ ನಾಯಿಯನ್ನು ಹೊತ್ತೊಯ್ದಿರುವುದು ಗ್ರಾಮಸ್ಥರಲ್ಲಿನ ಭೀತಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ಚಿರತೆ ಹಾವಳಿಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಇಲಾಖೆಯು ಯಾವುದೇ ಕ್ರಮಕೈಗೊಂಡಿಲ್ಲವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News