ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಸಿಎಂ: ಸಿದ್ದರಾಮಯ್ಯ

Update: 2019-09-15 17:25 GMT

ಮಂಡ್ಯ, ಸೆ.15: ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಸಿಎಂ. ಮಂಡ್ಯದವರಿಗೆ ಗಡಸು ಇರಬೇಕಿತ್ತು. ಆದರೆ, ಯಡಿಯೂರಪ್ಪ ಮಂಡ್ಯದವರಾದರೂ ಗಡಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಜಿಲ್ಲಾ ಕುರುಬರ ಸಂಘ ರವಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಗರಸಭೆ, ಪುರಸಭೆ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಜನವಿರೋಧಿ ಸರಕಾರಗಳು. ಇಂತಹ ಜನದ್ರೋಹಿ ಸರಕಾರಗಳನ್ನು ಹಿಂದೆಂದೂ ನೋಡಿಲ್ಲ. ಎರಡೂ ಸರಕಾರಗಳಿಗೆ ಬಡವರು, ರೈತರು, ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರ ರಾಜ್ಯದ ನೆರೆಸಂತ್ರಸ್ತರಿಗೆ ಒಂದು ರೂಪಾಯಿ ಪರಿಹಾರ ನೀಡಲಿಲ್ಲ. ರಾಜ್ಯ ಸರಕಾರ ಮನವಿ ಮಾಡಿದರೂ ಪುರಸ್ಕರಿಸಿಲ್ಲ. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಅವರಿಗೆ ಜವಾಬ್ಧಾರಿ ಇಲ್ಲವೇ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಬಿಜೆಪಿಯವರು ಮತ್ತೆ ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡಿದ್ದರು. ಆದರೆ, ಈಗ ಕಾಲ ಸರಿ ಇಲ್ಲ ಅಂತಾ ಸುಮ್ಮನಿದ್ದಾರೆ. ನಮ್ಮ ಪಾರ್ಟಿಯಿಂದ ಯಾರೂ ಹೋಗಲ್ಲ. ಡಿ.ಕೆ.ಶಿವಕುಮಾರ್ ಅವರ  ಭೇಟಿಗೆ ದೆಹಲಿಗೆ ಹೋಗಿದ್ದೆ. ಈ.ಡಿ ಅಧಿಕಾರಿಗಳು ಭೇಟಿಗೆ ಅವಕಾಶ ಕೊಡಲಿಲ್ಲ, ವಾಪಸ್ ಬಂದೆ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮಂಡ್ಯಕ್ಕೆ 8.5 ಸಾವಿರ ಕೋಟಿ ಬಿಡುಗಡೆಯಾಗಿರುವ ವಿಚಾರ ನನಗೆ ಗೊತ್ತಿಲ್ಲ, ಘೋಷಣೆ ಮಾಡಿದ್ದು ಮಾತ್ರ ಗೊತ್ತು. ಮಂಡ್ಯಕ್ಕೆ ಅಷ್ಟು ಅನುದಾನ ಬಂದಿದ್ದರೆ ನನಗೂ ಖುಷಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News