ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೃದಯವೇ ಇಲ್ಲ: ಕೆ.ಹೆಚ್. ಮುನಿಯಪ್ಪ

Update: 2019-09-16 17:21 GMT

ಕೋಲಾರ, ಸೆ.16: ಅತಿವೃಷ್ಟಿಯಿಂದ ರಾಜ್ಯದಲ್ಲಿ ಅತ್ಯಂತ ಭೀಕರ ಪರಿಸ್ಥಿತಿ ಎದುರಾಗಿದೆ, ಪ್ರಧಾನಿ ರಾಜ್ಯಕ್ಕೆ ಬಂದರೂ ಸೌಜನ್ಯಕ್ಕೂ ನೆರೆ ಸಂತ್ರಸ್ತರ ಬಗ್ಗೆ ಮಾತಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೃದಯವೇ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಕಿಡಿಕಾರಿದ್ದಾರೆ. 

ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಇತ್ತೀಚೆಗೆ ಇಸ್ರೋಗೆ ಬಂದಿದ್ದರು. ಆಗ ನೆರೆಯಿಂದ ತತ್ತರಿಸಿ ಹೋಗಿದ್ದ ಸಂತ್ರಸ್ತರಿಗೆ ಸಂಬಂಧ ಪಟ್ಟಂತೆ ಒಂದು ಸಣ್ಣ ಸಭೆಯನ್ನೂ ಮಾಡಿಲ್ಲ. ಇಂತಹ ನಿರ್ಲಕ್ಷ್ಯ ಭಾವನೆ ಸರಿಯಲ್ಲ ಎಂದರು.

ಕಳೆದ 50 ವರ್ಷಗಳಿಂದ ಕಂಡರಿಯದ ಭೀಕರ ಜಲಪ್ರಳಯಕ್ಕೆ ರಾಜ್ಯ ತುತ್ತಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದಿಂದ ಪರಿಹಾರ ತರುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಪ್ರಧಾನಿಗೆ ಮುಖ್ಯಮಂತ್ರಿ ಮೇಲೆ ನಂಬಿಕೆ ಇಲ್ಲ. ಸಿಎಂಗೆ ಪರಿಹಾರ ತರುವ ಶಕ್ತಿ ಇಲ್ಲ ಎಂದು ದೂರಿದರು. 

ರಾಜ್ಯದ ಅರ್ಧ ಭಾಗ ನೆರೆಗೆ ತುತ್ತಾಗಿದ್ದು, ಬಯಲುಸೀಮೆ ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಉಂಟಾಗಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಸಂಸದರ ಪಕ್ಷಾತೀತ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಬಯಲುಸೀಮೆ ನೀರಾವರಿ ಯೋಜನೆ, ಕೆ.ಸಿ.ವ್ಯಾಲಿ, ಹೆಚ್.ಎನ್.ವ್ಯಾಲಿ, ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಒತ್ತಡ ಹೇರಲಾಗುವುದು ಎಂದರು. 

ಇತ್ತೀಚೆಗೆ ಸಂಸದ ಮುನಿಸ್ವಾಮಿ ಸಾರ್ವಜನಿಕ ಸಭೆಗಳಲ್ಲಿ ಅನಗತ್ಯವಾಗಿ ನನ್ನ ಹೆಸರು ತೆಗೆದುಕೊಳ್ಳುತ್ತಿದ್ದಾರೆ. ಅವರು ಆಕಸ್ಮಿಕ ಸಂದರ್ಭದಲ್ಲಿ ಸಂಸತ್ ಪ್ರವೇಶ ಮಾಡಿದ್ದಾರೆ. ನೆನೆಗುದಿಗೆ ಬಿದ್ದಿರುವ ರೈಲ್ವೇ ಕೋಚ್ ಫ್ಯಾಕ್ಟರಿ, ಹೊಸ ರೈಲು ಮಾರ್ಗ, ಮೊದಲಾದ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆಲ್ಲಬೇಕು. ಅದಕ್ಕೆ ನಾವೂ ಸಹ ಬೆಂಬಲ ಕೊಡುತ್ತೇವೆ. ಆದರೆ ಅದು ಬಿಟ್ಟು ಬಾಯಿ ಚಪಲಕ್ಕೆ ಮಾತಾಡುವುದು ಬೇಡ. ಸಂಸದ ಮುನಿಸ್ವಾಮಿ ಚಿಲ್ಲರೆ ಮಾತುಗಳು ಆಡೋದು ಬಿಡಬೇಕು. ಅದು ಕಾರ್ಪೊರೇಷನ್ ಹಂತದ ಮಾತುಗಳು. ಅದಕ್ಕೆ ಬದಲಾಗಿ ಪಾರ್ಲಿಮೆಂಟ್ ಸದಸ್ಯ ಸ್ಥಾನಕ್ಕೆ ಗೌರವ ತರುವ, ಸಂಸತ್ ಘನತೆಗೆ ತಕ್ಕ ಮಾತುಗಳು ಆಡಲಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಮುಖಂಡರಾದ ಆನಂದರೆಡ್ಡಿ, ಅಥಾವುಲ್ಲಾ, ಇಕ್ಬಾಲ್ ಅಹಮದ್, ಉದಯಕುಮಾರ್,  ಊರುಬಾಗಿಲು ಶ್ರೀನಿವಾಸ, ಜಯದೇವ್ ಇದ್ದರು. 

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ, ಈಗ ಮತ್ತೆ ಕಾಂಗ್ರೆಸ್ ಪಕ್ಷದ ಹೆಸರು  ಹೇಳಲು ನಾಚಿಕೆ ಆಗಬೇಕು. ಕಾಂಗ್ರೆಸ್ ಸೋಲಿಗೆ ಕಾರಣವಾದ ಎಲ್ಲರ ಮೇಲೂ ಹೈಕಮಾಂಡ್ ಕ್ರಮ ಜರುಗಿಸುತ್ತದೆ .

-ಕೆ. ಹೆಚ್.ಮುನಿಯಪ್ಪ, ಮಾಜಿ ಸಂಸದ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News