ಸಂತ್ರಸ್ತರಿಗೆ ಪರ್ಯಾಯ ಭೂಮಿ ನೀಡಲು 374 ಎಕರೆ ಜಮೀನು ಗುರುತಿಸಲಾಗಿದೆ: ಸಚಿವ ಆರ್.ಅಶೋಕ್

Update: 2019-09-19 17:16 GMT

ಚಿಕ್ಕಮಗಳೂರು, ಸೆ.19: ಅತಿವೃಷ್ಟಿಯಿಂದ ಮನೆ ಹಾಗೂ ಭೂಮಿಯನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಬಿದರಹಳ್ಳಿಯ ನೆರೆ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಅಪಾರ ಭೂಮಿ, ಮನೆ ಹಾಗೂ ಬೆಳೆಗಳು ನಾಶವಾಗಿದ್ದು, ಸಂತ್ರಸ್ತರಿಗೆ ತುಂಬಲಾರದ ನಷ್ಟವಾಗಿದೆ. ಈ ನಿಟ್ಟಿನಲ್ಲಿ ಮನೆ, ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಂತ್ರಸ್ತರಿಗೆ ಪರ್ಯಾಯವಾಗಿ ಮನೆ ಕಟ್ಟಲು ಜಾಗ ಹಾಗೂ ಜಮೀನನ್ನು ನೀಡಲು ಈಗಾಗಲೇ 374 ಎಕರೆ ಸರಕಾರಿ ಜಾಗವನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ಈ ಜಾಗವನ್ನು ಸಂತ್ರಸ್ತರಿಗೆ ನೀಡಲಾಗುವುದು. ಜೊತೆಗೆ ಬಾಡಿಗೆ ಮನೆಯಲ್ಲಿರುವರನ್ನು ಜಿಲ್ಲಾಧಿಕಾರಿಗಳೇ ಗುರುತಿಸಿ ತಲಾ 5000 ರೂ. ನೀಡಬೇಕೆಂದು ಸೂಚಿಸಿದರು. 

ಯಾವುದೇ ಸಂತ್ರಸ್ತರಿಗೆ ಜಮೀನು ಖಾತೆ ಇದ್ದರೂ ಅಥವಾ ಇಲ್ಲದಿದ್ದರೂ ಕಣ್ಣಿಗೆ ಕಾಣುವ ನೋವಿನ ಸಂದರ್ಭಗಳನ್ನು ಅರಿತು ಯಾವ ದಾಖಲಾತಿ ಇಲ್ಲದೆಯೇ ಅಧಿಕಾರಿಗಳು ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಬೇಕು. ಅತಿವೃಷ್ಟಿಯಿಂದ ಜೀವ ಕಳೆದುಕೊಂಡವರಿಗೆ ತಲಾ 5 ಲಕ್ಷ ನೀಡಲಾಗಿದೆ. ಆ ಹಣವನ್ನು ಚೆಕ್ ಮುಖಾಂತರ ನೀಡದೇ ನೇರವಾಗಿ ಸಂತ್ರಸ್ತರ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ಪಾತ್ರೆ ಪರಿಕರಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 10,000 ರೂ. ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿಗಳ ಪರಿಹಾರ ನಿಧಿ ಖಾತೆಯಲ್ಲಿ ಅನುದಾನವಿದ್ದು, ಹಾನಿಗೊಳಗಾಗಿರುವ ಪ್ರದೇಶಗಳಿಗೆ ಅವಶ್ಯಕತೆಗನುಗುಣವಾಗಿ ಹಣ ಬಿಡುಗಡೆ ಮಾಡಬಹುದಾಗಿದ್ದು, ಕೇಂದ್ರ ಸರ್ಕಾರದ ಬೆಳೆ ಹಾನಿ ಪರಿಹಾರ ಇನ್ನೂ ನಾಲ್ಕೈದು ದಿನಗಳಲ್ಲಿ ಬರಲಿದೆ ಎಂದು ಭರವಸೆ ನೀಡಿದರು. ಸಂತ್ರಸ್ತರನ್ನು ಸ್ಥಳಾಂತರಿಸಲು ಜಾಗ ಗುರುತಿಸಿರುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಳೆ ಹಾನಿಯಿಂದ ಭಾಗಶಃ ಶೇ.80ರಷ್ಟು ಮನೆ ಕಳೆದುಕೊಂಡವರಿಗೆ ಶೀಘ್ರ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಹಣವನ್ನು ನೆರೆ ಸಂತ್ರಸ್ತರಿಗೆ ನೇರವಾಗಿ ನೀಡುವುದರಿಂದ ತಮ್ಮ ತಮ್ಮ ಮನೆಗಳ ದುರಸ್ಥಿ ಕಾರ್ಯಗಳನ್ನು ಸುಲಭವಾಗಿ ಸಂತ್ರಸ್ತರೇ ಕೈಗೊಳ್ಳಬಹುದಾಗಿದೆ. ಅಲ್ಲದೇ ನೆರೆ ಸಂತ್ರಸ್ತರ ಮಕ್ಕಳಿಗೆ ಅವಶ್ಯವಿರುವ ಶಿಕ್ಷಣವನ್ನು ಒದಗಿಸಬೇಕು ಹಾಗೂ ಸಂತ್ರಸ್ತ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಅನುತ್ತೀರ್ಣ ಮಾಡಬಾರದೆಂದು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರಲ್ಲದೇ ಸಂತ್ರಸ್ತರಿಗೆ 100 ದಿನಗಳ ನರೇಗಾದ ವತಿಯಿಂದ ಕೆಲಸ ಒದಗಿಸಲಾಗುವುದುಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ, ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಜೀವರಾಜ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

ಅತಿವೃಷ್ಟಿಯಿಂದ ಸಂತ್ರಸ್ತರಾಗಿ ಬಿದರಹಳ್ಳಿ ಗ್ರಾಮದಲ್ಲಿನ ನೆರ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಅಶೋಕ್, ಆಹಾರ ಗುಣ ಮಟ್ಟವನ್ನು ಪರಿಶೀಲಿಸುವ ಉದ್ದೇಶದಿಂದ ಸಂತ್ರಸ್ತರ ಜೊತೆ ಊಟ ಮಾಡಿದರು. ಈ ವೇಳೆ ಸಂತ್ರಸ್ತರು, ಕಾಳಜಿ ಕೇಂದ್ರಕ್ಕೆ ಸಚಿವರು ಬರುತ್ತಾರೆಂಬ ಕಾರಣಕ್ಕೆ ಇಂದು ಒಳ್ಳೆಯ ಅಡುಗೆ ಮಾಡಿ ಹಾಕಿದ್ದಾರೆ. ಬಾಕಿ ದಿನದಂದು ಕಳಪೆ ಗುಣಮಟ್ಟದ ಊಟ ನೀಡುತ್ತಾರೆ. ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಚಿವರ ಬಳಿ ದೂರು ಹೇಳಿದರು. ಇದಕ್ಕೆ ಸಚಿವ ಅಶೋಕ್, ಜಿಲ್ಲಾಧಿಕಾರಿ ಸೇರಿದಂತೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ಪಡೆದು, ಸಂತ್ರಸ್ತರಿಗೆ ಪ್ರತಿನಿತ್ಯವೂ ಉತ್ತಮ ಆಹಾರ ನೀಡಬೇಕು. ಈ ಬಗ್ಗೆ ದೂರು ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News