ಹೊಸದುರ್ಗ: ಭೀಕರ ವಾಹನ ಅಪಘಾತದಲ್ಲಿ ನಾಲ್ವರು ಮೃತ್ಯು

Update: 2019-09-22 05:15 GMT

ಚಿತ್ರದುರ್ಗ, ಸೆ.22: ಕಾರು ಮತ್ತು ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ರವಿವಾರ ಮುಂಜಾನೆ ಹೊಸದುರ್ಗ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ನಿವಾಸಿಗಳಾದ ಗೌತಮ್ ಸಿಂಗ್, ಮದನ್ ಸಿಂಗ್, ಮುಖೇಶ್ ಸಿಂಗ್ ಹಾಗೂ ಕ್ರೂಸರ್ ಚಾಲಕ ಲೋಕೇಶ್ ಎಂದು ಗುರುತಿಸಲಾಗಿದೆ.

ಚಿತ್ರದುರ್ಗದಲ್ಲಿ ಶನಿವಾರ ನಡೆದ ಗಣೇಶೋತ್ಸವದ ಶೋಭಯಾತ್ರೆಯಲ್ಲಿ ಭಾಗವಹಿಸಲು ಲೋಕೇಶ್ ಕ್ರೂಸರ್ನಲ್ಲಿ ಆಗಮಿಸಿದ್ದರು. ಗಣೇಶ ವಿಸರ್ಜನೆ ಮಹೋತ್ಸವ ಮುಗಿಸಿ ರವಿವಾರ ನಸುಕಿನಲ್ಲಿ ಅರಸೀಕೆರೆಗೆ ಮರಳುವಾಗ ಈ ಅಪಘಾತ ಸಂಭವಿಸಿದೆ. ಗೌತಮ್ ಸಿಂಗ್ ಹಾಗೂ ಸ್ನೇಹಿತರು ವೈಯಕ್ತಿಕ ಕಾರ್ಯ ನಿಮಿತ್ತ ಕಾರಿನಲ್ಲಿ ಹೊಸದುರ್ಗಕ್ಕೆ ಆಗಮಿಸುತ್ತಿದ್ದರು. ಹೊಸದುರ್ಗದಿಂದ ಅರಸೀಕೆರೆ ಕಡೆಗೆ ಹೊರಟಿದ್ದ ಕ್ರೂಸರ್ ಹಾಗೂ ಹೊಸದುರ್ಗ ಕಡೆ ಬರುತ್ತಿದ್ದ ಕಾರು ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಎರಡು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಕಾರಿನಲ್ಲಿದ್ದ ಮೂವರು ಹಾಗೂ ಕ್ರೂಸರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೊಸದುರ್ಗ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News