ಚಿಕ್ಕಮಗಳೂರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು

Update: 2019-09-22 06:46 GMT

ಚಿಕ್ಕಮಗಳೂರು, ಸೆ.22: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಖಾಂಡ್ಯ ಸಮೀಪದ ಬಸಾಪುರದ ಯುವತಿ ಚಿಕಿತ್ಸೆ ಫಲಕಾರಿಯಾಗಿದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಬಸಾಪುರದ ಬಿಂದೂ(23) ಮೃತಪಟ್ಟ ಯುವತಿ. ಬಾಳೆಹೊನ್ನೂರು ಸಮೀಪದ ಗಡಿಗೇಶ್ವರ ನಿವಾಸಿ ಮಿಥುನ್ ಕೊಲೆ ಆರೋಪಿಯಾಗಿದ್ದಾನೆ.

ಘಟನೆ ವಿವರ: ಪ್ರೀತಿಸುವ ವಿಚಾರವಾಗಿ ಮಿಥುನ್ ಮತ್ತು ಬಿಂದೂ ನಡುವೆ ನಾಲ್ಕು ದಿನಗಳ ಹಿಂದೆ ನರಸಿಂಹರಾಜಪುರ ತಾಲುಕಿನ ಮಹಲ್ಗೊಡು ಎಂಬಲ್ಲಿ ವಾಗ್ವಾದ ನಡೆದಿದೆೆ. ಈ ವೇಳೆ ಕೋಪಗೊಂಡ ಮಿಥುನ್ ಬಿಂದೂವನ್ನು ಮೊದಲು ಭದ್ರಾನದಿಗೆ ತಳ್ಳಿದ್ದನೆನ್ನಲಾಗಿದೆ. ನದಿಗೆ ತಳ್ಳಲ್ಪಟ್ಟ ಬಿಂದೂ ಈಜಿ ದಡ ಸೇರುತ್ತಿದ್ದಂತೆ ಮತ್ತೆ ಅವರ ಮೇಲೆ ದಾಳಿ ಮಾಡಿದ ಆರೋಪಿ ಮಿಥುನ್ ಚಾಕುವಿನಿಂದ ಕುತ್ತಿಗೆ, ಬೆನ್ನು, ಹೊಟ್ಟೆಗೆ ಮನಬಂದಂತೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಯುವತಿಯ ಕಿರುಚಾಟ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಿಂದೂವನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ದ ಪೋಷಕರು ಅಲ್ಲಿಂದ ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ದಾಖಲಿಸಿದ್ದರು. ಆದರೆ ಶನಿವಾರ ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗಗೆ ಬಿಂದೂ ಕೊನೆಯುಸಿರೆಳೆದಿದ್ದಾರೆ ತಿಳಿದು ಬಂದಿದೆ.

ಈ ನಡುವೆ ಆರೋಪಿ ಮಿಥುನ್ ತಲೆಮರೆಸಿಕೊಂಡಿದ್ದಾನೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News