ನೂತನ ಪಿಂಚಣಿ ಯೋಜನೆ ವಿರುದ್ಧದ ಹೋರಾಟ ಬೆಂಬಲಿಸಲು ಕರೆ

Update: 2019-09-22 17:38 GMT

ಬೆಳಗಾವಿ, ಸೆ.22: ಸರಕಾರಿ ನೌಕರರ ಹಿತರಕ್ಷಣೆಗೆ ಸಂಘ ಬದ್ಧವಿದೆ. ಆದುದರಿಂದ, ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್)ರದ್ದುಪಡಿಸುವಂತೆ ಒತ್ತಾಯಿಸಿ ನಡೆಸಲಾಗುವ ಹೋರಾಟದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಕರೆ ನೀಡಿದರು.

ರವಿವಾರ ನಗರದ ಗಾಂಧಿ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ನೌಕರರ ಸಂಘದಲ್ಲಿ ಓಟ್ಟಾರೆ 54 ಸಾವಿರ ಜನರು ಸದಸ್ಯರಿದ್ದು, ಪ್ರತಿಯೊಬ್ಬ ನೌಕರನ ಹಿತರಕ್ಷಣೆ ನಿಟ್ಟಿನಲ್ಲಿ ಶ್ರಮಿಸಲಾಗುವುದು. ನೌಕರರ ಸಂಘ ಕಟ್ಟಲು ಅನೇಕ ಹೋರಾಟಗಾರರು, ಧೀಮಂತರು, ನಾಯಕರು ಮುಂತಾದವರು ಹೋರಾಟವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.

ನಾವು ಮಾಡುವ ಕೆಲಸ ಮುಖ್ಯ. ಸ್ತ್ರೀ ಮತ್ತು ಷುರುಷ ಎಂಬ ಭಾವನೆಗಳನ್ನು ತೆಗೆದು ಹಾಕಬೇಕು. ನಮ್ಮ ಸಮಸ್ಯೆಗಳನ್ನು ನಾವೇ ಕುಳಿತುಕೊಂಡು ಚರ್ಚಿಸಿದರೆ ಸಂಘಟನೆ ಬೆಳೆಯುತ್ತದೆ. ಸರಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಲು ಹೊಸ ಯೋಜನೆ ಆರಂಭಿಸಲಾಗುವುದು ಎಂದು ಷಡಕ್ಷರಿ ತಿಳಿಸಿದರು.

ಬೆಂಗಳೂರಿನಲ್ಲಿ 3 ಎಕರೆ ಜಮೀನಿನಲ್ಲಿ ನೌಕರರ ಸಭಾ ಭವನ ಹಾಗೂ ಬೆಳಗಾವಿಯಲ್ಲಿ 2 ಎಕರೆ ಜಮೀನಿನಲ್ಲಿ 2 ವರ್ಷದಲ್ಲಿ ನೌಕರರ ಭವನ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ನೌಕರರ ಸಂಘದ ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ ಮಾತನಾಡಿ, ಸರಕಾರದ ಹಿತ ಕಾಯುವಲ್ಲಿ ಈ ಸಂಘಟನೆ ಹಿಂದೆ ಸರಿಯುವುದಿಲ್ಲ, ಪ್ರತಿಯೊಬ್ಬ ನೌಕರರು ಸಂಘಟನೆಗೆ ಕೈ ಜೋಡಿಸಬೇಕು. ಇಂದಿನ ವಿದ್ಯಾರ್ಥಿಗಳು ಒಳ್ಳೆಯ ರೂಪಿಸುವಲ್ಲಿ ಮುಂದಾಗಬೇಕು ಹಾಗೂ ನವ ಭಾರತ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ಮಾತನಾಡಿ, ನೌಕರರ ಸಂಘದಲ್ಲಿ ಖಾಲಿ ಇರುವ ಪದಾಧಿಕಾರಿಗಳನ್ನು ನೇಮಿಸಬೇಕು. ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಸಮಾಜದ ಮೌಲ್ಯಗಳನ್ನು ತಿಳಿದುಕೊಂಡು ಉತ್ತಮ ಸಮಾಜವನ್ನು ಕಟ್ಟಲು ಸಿದ್ದರಾಗಬೇಕು ಎಂದು ಹೇಳಿದರು.

ಬೆಳಗಾವಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ ಗೌಡಪ್ಪಪಾಟೀಲ, ನಿಕಟಪೂರ್ವ ತಾಲೂಕು ಅಧ್ಯಕ್ಷರು, ಕಚೇರಿ ಸಿಬ್ಬಂದಿಗಳಿಗೆ, ಜಿಲ್ಲಾ ಸಂಘದ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ತಾಲೂಕು ಅಧ್ಯಕ್ಷರು, ಕಾರ್ಯಕಾರಿ ಸಮಿತಿಗೆ ನೂತನವಾಗಿ ನಾಮನಿರ್ದೇಶನ ಮಾಡಿದ ಶಿಕ್ಷಕರಿಗೆ ಹಾಗೂ ಕಾರ್ಯಕ್ರಮದ ನಿರೂಪಕರಿಗೆ ಸನ್ಮಾನಿಸಲಾತು. ಬಡ ಪ್ರತಿಭಾವಂತ ಮಕ್ಕಳಿಗೆ ಹಾಗೂ ಎಸ್ಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News