ಬಿಎಸ್ವೈ-ಕೇಂದ್ರ ಸರಕಾರದ ಪ್ರಭಾವದಿಂದ ಉಪ ಚುನಾವಣೆ ಮುಂದೂಡಿಕೆ: ದೇವೇಗೌಡ ಆರೋಪ
ಬೆಂಗಳೂರು, ಸೆ.26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸರಕಾರದ ಪ್ರಭಾವದಿಂದಾಗಿ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿದ್ದ ಉಪ ಚುನಾವಣೆ ಮುಂದೂಡಿಕೆಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ವಿಚಾರಣೆ ಮುಂದೂಡಲಾಗಿದೆ ಎಂದರು.
ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ತಾವಾಗಿಯೇ ನ್ಯಾಯಾಲಯಕ್ಕೆ ಹೋಗಿ ಅನರ್ಹ ಶಾಸಕರು ಸ್ಪರ್ಧೆ ಮಾಡಬಹುದು ಎಂದು ಹೇಳಿಕೆ ಕೊಟ್ಟಿದೆ. ಈಗ ನಾನು ಏನು ಮಾಡಲು ಸಾಧ್ಯವಿಲ್ಲ ಎಂದಿದೆ. ಸ್ವಾಯತ್ತ ಸಂಸ್ಥೆ ವಿಫಲವಾಗಿದೆ ಎಂಬ ಭಾವನೆ ಎಲ್ಲೆಡೆ ಇದೆ ಎಂದು ಆವರು ಹೇಳಿದರು.
ಆದುದರಿಂದ, ನ್ಯಾಯಾಲಯ ಇಂತಹ ತೀರ್ಮಾನ ಕೈಗೊಂಡಿರಬಹುದು. ನ್ಯಾಯಾಲಯದ ಆದೇಶದ ಪ್ರತಿ ಓದಿದ ಬಳಿಕ ಈ ಸಂಬಂಧ ನಾನು ಮಾತನಾಡುವೆ. ಇದರ ಬಗ್ಗೆ ಯಾವುದೇ ಕೆಟ್ಟ ಶಬ್ದ ಬಳಕೆ ಮಾಡುವುದಿಲ್ಲ ಎಂದು ದೇವೇಗೌಡ ಹೇಳಿದರು.