ಮಹಿಷ ದಸರಾಗೆ ಏಕೆ ಅಡ್ಡಿಪಡಿಸಿದರು ಎಂಬುದು ನನಗೆ ಗೊತ್ತಿಲ್ಲ: ಸಂಸದ ವಿ.ಶ್ರೀನಿವಾಸಪ್ರಸಾದ್

Update: 2019-09-27 18:26 GMT

ಮೈಸೂರು,ಸೆ.27: ಮಹಿಷ ದಸರಾ ಆಚರಣೆಗೆ ಏಕೆ ಅಡ್ಡಿಪಡಿಸಿದರು ಎಂದು ನನಗೆ ಗೊತ್ತಿಲ್ಲ, ನಾನು ದೆಹಲಿಯಲ್ಲಿದ್ದು ಈ ಸಂಬಂಧ ಮಾಹಿತಿ ಪಡೆಯುತ್ತೇನೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.

ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ, ಮೂಲನಿವಾಸಿಗಳ ಪ್ರತಿಭಟನೆ ಸಂಬಂಧ 'ವಾರ್ತಾಭಾರತಿ' ಜೊತೆ ಶುಕ್ರವಾರ ದೂರವಾಣಿ ಮೂಲಕ ಮಾತನಾಡಿ, ತಮ್ಮ ಅಭಿಪ್ರಾಯ ತಿಳಿಸಿದರು.

ಮಹಿಷ ದಸರವನ್ನು ಅವರ ಪಾಡಿಗೆ ಆವರು ಆಚರಿಸಿಕೊಳ್ಳುತ್ತಿದ್ದರು. ಇನ್ನು ಸರಕಾರ ಮೈಸೂರು ದಸರಾ ಆಚರಣೆ ಮಾಡುತ್ತಿತ್ತು. ಏಕೆ ಅಡ್ಡಿಪಡಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ, ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಇದೊಂದು ಸೂಕ್ಷ್ಮ ವಿಚಾರ ಎಂದು ಹೇಳಿದರು.

ಮಹಿಷ ದಸರಾ ಆಚರಣೆ ಮಾಡುವವರು ನನ್ನನ್ನು ಈ ಹಿಂದೆಯೂ ಸಂಪರ್ಕಿಸಿಲ್ಲ, ಈಗಲೂ  ಸಂಪರ್ಕಿಸಿಲ್ಲ. ಹಾಗಾಗಿ ಇದರ ಬಗ್ಗೆ ಮಾತನಾಡುವುದಿಲ್ಲ ಎಂದರು.

ನನ್ನ ನಲವತ್ತು ವರ್ಷ ರಾಜಕಾರಣದಲ್ಲಿ ಎಲ್ಲವನ್ನು ನೋಡಿದ್ದೇನೆ. ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂದು ನನಗೆ ಗೊತ್ತಿದೆ. ಸಮಯ ಬಂದಾಗ ಇದಕ್ಕೆ ಪ್ರತಿಕ್ರಿಯಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News