ನಮ್ಮನ್ನು ಟೀಕಿಸುವವರ ಭಾಷಣಕ್ಕೆ ಮೋದಿಯೇ ಬಂಡವಾಳ: ಚಕ್ರವರ್ತಿ ಸೂಲಿಬೆಲೆಗೆ ಪ್ರತಾಪ್ ಸಿಂಹ ತಿರುಗೇಟು

Update: 2019-10-03 15:26 GMT

ಬೆಂಗಳೂರು, ಅ.2: ನಮ್ಮನ್ನು ಟೀಕಿಸುವವರ ಭಾಷಣಕ್ಕೆ ಮೋದಿಯೇ ಬಂಡವಾಳ ಎಂದು ಯುವ ಬೀಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ತನ್ನ ಪೇಸ್ಬುಕ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾನು, ಭಗವಂತ ಕೂಬಾ, ತೇಜಸ್ವಿ ಸೂರ್ಯ ಹಾಗೂ ಕೆಲ ಸಂಸದರು ಗೆದ್ದಿದ್ದು ಮೋದಿಯವರ ಹೆಸರಿನಿಂದಲೇ ಎಂದು ನಿಷ್ಕಳ್ಮಷ ಭಾವದಿಂದ ಒಪ್ಪಿಕೊಳ್ಳುತ್ತೇನೆ. ಮೋದಿಯನ್ನು ಪ್ರಶ್ನಿಸುವವರನ್ನು ನಾವು ಪ್ರಶ್ನಿಸಿದರೆ ಅದು ಮೋದಿಯ ಮೇಲಿನ ಅಭಿಮಾನದಿಂದ ಮಾಡುವ ಟೀಕೆ ಎಂದು ಭಾವಿಸುವುದು ಬೇಡ ಎಂದು ಅವರು ಹೇಳಿದರು.

ಪ್ರವಾಹ ಪೀಡಿದ ಪ್ರದೇಶಗಳ ಎಲ್ಲಾ ಮನೆಗಳಿಗೆ ತಕ್ಷಣಕ್ಕೆ ಕೊಡಬೇಕಾದ ಪರಿಹಾರವನ್ನು ಮೋದಿ ನೀಡಿದ್ದಾರೆ. ಆದರೆ ಅವರು ಯಾವುದೇ ರಾಜ್ಯಗಳ ನಡುವೆ ತಾರತಮ್ಯ ಮಾಡಿಲ್ಲ. ಕರ್ನಾಟಕದ ಎಲ್ಲ ವಿಚಾರವಾಗಿ ಮೋದಿ ನಮ್ಮ ಪರ ಇದ್ದಾರೆ. ಅವರು ಯಾವತ್ತೂ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ. ಬೇರೆ ರಾಜ್ಯಗಳಿಗೆ ಪರಿಹಾರ ಕೊಟ್ಟು ಕರ್ನಾಟಕಕ್ಕೆ ಕೊಟ್ಟಿಲ್ಲ ಎಂದಾದರೆ ನೀವು ಟೀಕಿಸಿ. ಆದರೆ ನಮ್ಮಂತೆಯೇ ಮಹಾರಾಷ್ಟ್ರ, ಉತ್ತರಪ್ರದೇಶ, ಕೇರಳ, ತಮಿಳುನಾಡು, ಗುಜರಾತ್‌ ರಾಜ್ಯದವರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಪರಿಹಾರ ಕೊಟ್ಟು ನಮಗೆ ಕೊಟ್ಟಿಲ್ಲ ಎಂದಾದರೆ ಪ್ರಶ್ನಿಸಲಿ ಎಂದು ಹೇಳಿದರು.

ನಾವೆಲ್ಲಾ ಮೋದಿಯ ಹೆಸರಿನಿಂದ ಗೆದ್ದಿದ್ದು ನಿಜ. ಆದರೆ ಹೀಗೆ ಹೇಳುವವರ ಭಾಷಣಕ್ಕೆ ಮೋದಿಯೇ ಬಂಡವಾಳ. ಮೋದಿಯ ಹೆಸರೇಳಿಕೊಂಡರೆ ಮಾತ್ರ ಅವರಿಗೆ ಅಸ್ತಿತ್ವ ಎಂದು ಅವರು ಚಕ್ರವರ್ತಿ ಸೂಲಿಬೆಲೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು. 

ಇವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ನಾನು ಮೋದಿಯ ಆತ್ಮಕಥೆ ಬರೆದಿದ್ದೇನೆ. 2004ರಿಂದಲೇ ನಾನು ಮೋದಿ ಅಭಿಮಾನಿ. ಇವರ ಟೀಕೆ ವಿವೇಚನ ರಹಿತವಾಗಿದೆ ಎಂದ ಅವರು, ಸದಾನಂದಗೌಡ, ರಮೇಶ್ ಜಿಗಜಣಗಿ, ನಳಿನ್ ಕುಮಾರ್ ಕಟೀಲ್ ಮುಂತಾದ ಸಂಸದರು ಮೋದಿಯವರು ರಾಷ್ಟ್ರ ರಾಜಕಾರಣಕ್ಕೆ ಬರುವ ಮೊದಲೇ ಸಂಸದರಾಗಿದ್ದಾರೆ. ಟೀಕೆ ಮಾಡುವವರು ಇದನ್ನು ನೆನಪಿಸಲಿ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News