ಕೆ.ಆರ್.ಪೇಟೆ: ಮಳೆಗೆ ಮನೆ ಕುಸಿತ
Update: 2019-10-03 18:12 GMT
ಮಂಡ್ಯ, ಅ.3: ಕೆ.ಅರ್.ಪೇಟೆ ತಾಲೂಕು ಹೊಸಹೊಳಲು ಗ್ರಾಮದಲ್ಲಿ ಬುಧವಾರ ತಡರಾತ್ರಿ ಸುರಿದ ಮಳೆಗೆ ಮನೆ ಕುಸಿದಿದ್ದು, ಮತ್ತೊಂದು ಮನೆಗೆ ಸಿಡಿಲು ಬಡಿದು ಯಾರಿಗೂ ಅಪಾಯವಿಲ್ಲದೇ ಪಾರಾಗಿದ್ದಾರೆ.
ಗ್ರಾಮದ ಕಾಳಮ್ಮನಗುಡಿ ಬೀದಿಯಲ್ಲಿರುವ ಮೀಸೆ ಶಿವಣ್ಣ ಅವರ ಮನೆಯು ಮಳೆಗೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಯಾರಿಗೂ ಯಾವುದೇ ತೊಂದರೆ ಆಗಿಲ್ಲ.
ಇದೇ ಗ್ರಾಮದ ವಿಜಯನಗರ ಬಡಾವಣೆ ನಿವಾಸಿ ವಿನೋದಮ್ಮ ಅವರ ಮನೆಯ ಮೇಲ್ಛಾವಣೆಗೆ ಸಿಡಿಲು ಬಡಿದು ಮೇಲ್ಛಾವಣೆಯ ಮೇಲ್ಬಾಗ ಸ್ವಲ್ಪ ಜಖಂಗೊಂಡಿದೆ.
ಸಿಡಿಲು ರಭಸಕ್ಕೆ ಮನೆಯಲ್ಲಿದ್ದ ಸಾಮಾನುಗಳು ಬಿದ್ದು ಚೆಲ್ಲಾಪಿಲ್ಲಿಯಾಗಿ ಮಲಗಿದ್ದ ದೇವರಾಜು ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಪುರಸಭೆ ಸದಸ್ಯ ಎಚ್.ಆರ್.ಲೋಕೇಶ್ ಮತ್ತು ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.