ಯಡಿಯೂರಪ್ಪ-ಸಿದ್ದರಾಮಯ್ಯ ಒಗ್ಗೂಡಿ ಹೊಸ ಪಕ್ಷ ಸ್ಥಾಪಿಸಲಿ: ಮಹಾದೇಶ್ವರ ಸ್ವಾಮೀಜಿ

Update: 2019-10-09 14:23 GMT

ಬಾಗಲಕೋಟೆ, ಅ.9: ರಾಜ್ಯ ಅಭಿವೃದ್ಧಿಯಾಗಬೇಕಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಬೇಕೆಂದು ಕೂಡಲಸಂಗಮದ ಬಸವ ಧರ್ಮ ಪೀಠದ ಉತ್ತರಾಧಿಕಾರಿ ಮಹಾದೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಜನನಾಯಕರಾಗಿದ್ದಾರೆ. ಇಬ್ಬರೂ ಸೇರಿ ಪಕ್ಷ ಸ್ಥಾಪಿಸಿದರೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿದೆ ಎಂದರು.

ಪ್ರಾದೇಶಿಕ ಪಕ್ಷಗಳಿಂದಲೇ ತಮಿಳುನಾಡಿನಲ್ಲಿ ಅಭಿವೃದ್ಧಿಯಾಗಿದೆ. ಕರ್ನಾಟಕದಲ್ಲಿ ಈ ಇಬ್ಬರೂ ನಾಯಕರು ಒಗ್ಗೂಡಿ ಹೊಸ ಪಕ್ಷ ರಚಿಸಬೇಕು. ಇಬ್ಬರೂ ನಾಯಕರು ಮಾತುಕತೆ ನಡೆಸಿ ಪಕ್ಷ ಸ್ಥಾಪನೆಗೆ ಮುಂದಾಗಬೇಕು. ಇವರಿಗೆ ನಮ್ಮ ಬೆಂಬಲ ಹಾಗೂ ಜನತೆಯ ಬೆಂಬಲ ಸದಾ ಇರುತ್ತದೆ ಎಂದು ಅವರು ಹೇಳಿದ್ದಾರೆ.

'ಈಶ್ವರಪ್ಪರ ಜಾತಿ ಯಾವುದು': ನಾನು ಕುರುಬನಲ್ಲ, ಹಿಂದೂ ಅಲ್ಲವೆಂದು ಸಚಿವ ಈಶ್ವರಪ್ಪ ಹೇಳಿಕೊಂಡಿದ್ದಾರೆ. ಕೂಡಲ ಸಂಗಮದ ಶರಣ ಮೇಳದಲ್ಲಿ ನಾನು ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಳ್ಳುವ ಅವರು, ಜಾತಿಗೊಬ್ಬ ಸ್ವಾಮೀಜಿಯ ಕಾಲು ಮುಗಿಯಬೇಕಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಅವರು ಕುರುಬ ಕೋಟಾದಲ್ಲಿ ಸಚಿವ ಸ್ಥಾನ ಪಡೆದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಜಾತಿಗಳನ್ನು ರೂಪಿಸಿದವರು ಸ್ವಾಮೀಜಿಗಳಲ್ಲ. ಜಾತಿಗಳನ್ನು ನಿರ್ಮಿಸಿ ರಾಜಕಾರಣದ ಲಾಭ ಪಡೆಯುವವರು ರಾಜಕಾರಣಿಗಳು. ಚುನಾವಣೆ ಬಂದಾಗ ಇವರಿಗೆ ಜಾತಿ ನೆನಪಾಗುತ್ತದೆ. ಚುನಾವಣೆ ಮುಗಿದ ನಂತರ ಯಾವ ಜಾತಿಯವರೂ ಅಲ್ಲ ಎಂದು ಹೇಳಿಕೊಳ್ಳುತ್ತಾರೆ ಎಂದು ಈಶ್ವರಪ್ಪರನ್ನು ಟೀಕಿಸಿದರು.

ಯಡಿಯೂರಪ್ಪ ಬಗ್ಗೆ ಪ್ರಧಾನಿ ಮೋದಿಯವರು ಒಲ್ಲದ ಮನಸ್ಸಿನಿಂದ ಸ್ಪಂದಿಸುತ್ತಿದ್ದಾರೆ ಎನಿಸುತ್ತಿದೆ. ಬಿಹಾರಕ್ಕೆ ಭೇಟಿ ನೀಡಿ ಹಣ ಬಿಡುಗಡೆ ಮಾಡುವ ಪ್ರಧಾನಿ ರಾಜ್ಯದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಾರೆ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ನೆರೆ ಪರಿಹಾರ ಸಮರ್ಪಕವಾಗಿ ಬಿಡುಗಡೆಯಾಗಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಈಗಾಗಲೇ ರಾಜ್ಯದಲ್ಲಿ ಸಮಾವೇಶ ನಡೆಸಲಾಗಿದೆ. ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದಲ್ಲಿ ಮಾನ್ಯತೆಗೆ ಒತ್ತಾಯಿಸಿ ಸಮಾವೇಶ ಆಯೋಜಿಸಲಾಗುತ್ತದೆ. ಈ ಬಗ್ಗೆ ಬಸವಕಲ್ಯಾಣದಲ್ಲಿ ನಡೆಯಲಿರುವ ಕಲ್ಯಾಣ ಪರ್ವ ಸಮ್ಮೆಳನದಲ್ಲಿ ಚರ್ಚಿಸಲಾಗುತ್ತದೆ. ನಾವು ಹಿಂದೂ ಧರ್ಮದಲ್ಲಿದ್ದುಕೊಂಡೇ ಮಾನ್ಯತೆ ಕೇಳುತ್ತಿದ್ದೇವೆ ಎಂದು ಅವರು ವಿವರಿಸಿದರು.

ಲಿಂಗಾಯತ ಧರ್ಮವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಯಡಿಯೂರಪ್ಪ ಬೇರೆ ಪಕ್ಷ ಸ್ಥಾಪಿಸಲು ಮುಂದಾಗಬೇಕು. ಶಾಸಕ ಯತ್ನಾಳ್ ಸಂತ್ರಸ್ತರ ಪರವಾಗಿ ಮಾತನಾಡಿದ್ದಕ್ಕೆ ಬಿಜೆಪಿಯಿಂದ ನೊಟೀಸ್ ನೀಡಲಾಗಿದೆ. ಯತ್ನಾಳ್‌ರಂತಹ ಹತ್ತಾರು ನಾಯಕರು ಸಮಾಜಕ್ಕೆ ಬೇಕಾಗಿದ್ದಾರೆ ಎಂದು ಅವರು ಹೇಳಿದರು.

ಸಂಘ ಪರಿವಾರವೇ ಲಿಂಗಾಯತ ಧರ್ಮ ಒಡೆಯುತ್ತಿದೆ. ಯಡಿಯೂರಪ್ಪ ಆರೆಸ್ಸೆಸ್ ಕಪಿಮುಷ್ಠಿಯಲ್ಲಿದ್ದಾರೆ. ಅವರ ಬೆನ್ನಿಗೆ ಕೆಲವರು ಚೂರಿ ಹಾಕುತ್ತಿದ್ದಾರೆ. ಅವರು ಯಾರು ಎಂದು ಈಗ ಹೇಳುವುದಿಲ್ಲ.
-ಮಹಾದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠದ ಉತ್ತರಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News