ಮಧ್ಯಂತರ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ: ಆರ್.ವಿ.ದೇಶಪಾಂಡೆ
Update: 2019-10-09 17:13 GMT
ಬೆಳಗಾವಿ, ಅ.9: ಇತ್ತೀಚಿಗೆ ಬಿಜೆಪಿ ಶಾಸಕರ ವಿಭಿನ್ನ ಹೇಳಿಕೆಗಳನ್ನು ಗಮನಿಸಿದರೆ, ಮಧ್ಯಂತರ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಬುಧವಾರ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ನಾನು ಮಾತನಾಡಲ್ಲ. ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಆ ಪಕ್ಷದವರೇ ನಿರ್ಧರಿಸುತ್ತಾರೆ. ಆದರೆ, ಆ ಪಕ್ಷದ ಶಾಸಕರ ಭಿನ್ನಾಭಿಪ್ರಾಯದಿಂದ ಸರಕಾರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದರು.
ಅಧಿವೇಶನ ವಿಸ್ತರಿಸಿ: ರಾಜ್ಯದ ಹಲವು ಕಡೆ ಅತಿವೃಷ್ಟಿಯಾಗಿ ಜನರು ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಆಸ್ತಿ ಪಾಸ್ತಿ, ಪ್ರಾಣ ಹಾನಿ, ಬೆಳೆ ನಷ್ಟ ಸಂಭವಿಸಿದೆ. ಅಂದಾಜು 35 ಸಾವಿರ ಕೋಟಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದೆಲ್ಲರ ಬಗ್ಗೆ ಚರ್ಚಿಸಲು ಸಾಕಷ್ಟು ಸಮಯಾವಕಾಶ ಬೇಕು. ಹಾಗಾಗಿ, 10 ದಿನಗಳವರೆಗೆ ಅಧಿವೇಶನ ವಿಸ್ತರಿಸಬೇಕೆಂದರು.