ಆರ್ಥಿಕ ವ್ಯವಸ್ಥೆ ಹದಗೆಡಲು ಆತುರದ ನಿರ್ಧಾರವೇ ಕಾರಣ: ಚಿಂತಕ ರಾಮ್ ಪುನಿಯಾನಿ

Update: 2019-10-12 14:13 GMT

ಹುಬ್ಬಳ್ಳಿ, ಅ.12: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಜಾರಿಗೆ ಬಂದ ಬಳಿಕ ಸಾರ್ವಜನಿಕ ವಲಯದ ಉದ್ಯಮಗಳು ಕಾರ್ಪೊರೇಟ್ ಶಕ್ತಿಗಳ ವಶಕ್ಕೆ ಹೋಗುತ್ತಿವೆ. ಇನ್ನುಳಿದವು ಅವನತಿಯ ಹಂತ ತಲುಪಿವೆ ಎಂದು ಚಿಂತಕ ಪ್ರೊ.ರಾಮ್ ಪುನಿಯಾನಿ ಕಳವಳ ವ್ಯಕ್ತಪಡಿಸಿದ್ದಾರೆ. 

ಶನಿವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ಉದ್ಯಮಗಳನ್ನು ಪುನಶ್ಚೇತನಗೊಳಿಸಬೇಕಿದ್ದ ಸರಕಾರವೇ ಅವುಗಳನ್ನು ಕಾರ್ಪೊರೇಟ್ ವಶಕ್ಕೆ ನೀಡುತ್ತಿದೆ ಎಂದು ತಿಳಿಸಿದರು. ನೋಟು ರದ್ಧತಿ ಹಾಗೂ ಜಿಎಸ್‌ಟಿಯಂತಹ ಆತುರದ ನಿರ್ಧಾರಗಳು ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಿದ್ದು, ದೇಶದ ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಅದನ್ನು ಮರೆಮಾಚಿ ಈ ಕ್ರಮಗಳು ಆರ್ಥಿಕ ಸುಧಾರಣೆಯ ದೊಡ್ಡ ಕ್ರಮಗಳು ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುಂಪು ಹಲ್ಲೆ ಪಾಶ್ಚಿಮಾತ್ಯದ್ದೇ ಹೊರತು ಭಾರತದ್ದಲ್ಲ ಎಂದಿದ್ದಾರೆ. ಹಾಗಾದರೆ, ಇಷ್ಟು ವರ್ಷ ನಡೆಯದ ಘಟನೆಗಳು ಕಳೆದ ಐದು ವರ್ಷಗಳಲ್ಲಿ, ಅದೂ ಬಿಜೆಪಿ ಸರಕಾರದ ಅವಧಿಯಲ್ಲೇ ಯಾಕೆ ನಡೆಯುತ್ತಿವೆ ಎಂದು ಅವರು ಪ್ರಶ್ನಿಸಿದರು.

ಜನಾಭಿಪ್ರಾಯಕ್ಕಿಲ್ಲ ಮನ್ನಣೆ: ಜನಾಭಿಪ್ರಾಯದ ಯಾವುದೇ ನಿರ್ಧಾರ ಕೈಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣ. ಆದರೆ, ಜಮ್ಮು-ಕಾಶ್ಮೀರದಲ್ಲಿ ಸರಕಾರವೇ ಅಸ್ತಿತ್ವದಲ್ಲಿ ಇಲ್ಲದಿರುವಾಗ, ಏಕಾಏಕಿಯಾಗಿ 370 ಕಲಂ ರದ್ದುಗೊಳಿಸಿದ್ದು, ಸರಿಯಲ್ಲ. ಬದಲಿಗೆ, ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದ್ದರೆ, ಸರಕಾರದ ಕ್ರಮಕ್ಕೆ ಮತ್ತಷ್ಟು ಅರ್ಥ ಬರುತ್ತಿತ್ತು ಎಂದು ಅಭಿಪ್ರಾಯಪಟ್ಟರು. ವಸುಧೈವ ಕುಟುಂಬಕಂ ಹಿಂದೂ ಧರ್ಮದ ಮೂಲ. ಆದರೆ, ಗುಂಪು ಹಲ್ಲೆ, ಮರು ಮತಾಂತರ, ಸಸ್ಯಾಹಾರ ಸೇವನೆಗೆ ಒತ್ತಡ ಇತ್ಯಾದಿ ಈ ಧರ್ಮದ ಐಡೆಂಟಿಟಿಯಾಗಿ ರೂಪುಗೊಳ್ಳುತ್ತಿವೆ. ಎಲ್ಲರಿಗೂ ಒಳ್ಳೆಯದು ಬಯಸಬೇಕೆಂಬ ಧರ್ಮದ ತಿರುಳಿಗೆ ಬೆಲೆ ಇಲ್ಲವಾಗಿದೆ ಎಂದರು. 

ಮುಸ್ಲಿಮರು, ದಲಿತರೇ ಟಾರ್ಗೆಟ್

ದೇಶದ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಟ್ಟುಕೊಂಡು ಗುಂಪು ಹತ್ಯೆ ಮಾಡಲಾಗುತ್ತಿದೆ. ಶೋಷಿತರು ಹಾಗೂ ಅಲ್ಪಸಂಖ್ಯಾತರು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದರ ವಿರುದ್ಧ ಧ್ವನಿ ಎತ್ತಿ ಪ್ರಧಾನಿಗೆ ಪತ್ರ ಬರೆದ ಪ್ರಗತಿಪರರು ಹಾಗೂ ಚಿಂತಕರ ವಿರುದ್ಧವೇ ಪ್ರಕರಣ ದಾಖಲಿಸಿದ್ದ ಸರಕಾರ, ಕಡೆಗೆ ಒತ್ತಡಕ್ಕೆ ಮಣಿದು ರದ್ದುಗೊಳಿಸಿದೆ. ಅಂದರೆ, ಜನವಿರೋಧಿ ಕೃತ್ಯಗಳು ಮತ್ತು ಕೇಂದ್ರ ಸರಕಾರದ ವಿರುದ್ಧ ಮಾತನಾಡುವುದೇ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ.

-ಪ್ರೊ.ರಾಮ್ ಪುನಿಯಾನಿ, ಚಿಂತಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News