ಆಟವಾಡಲು ತೆರಳಿದ್ದ ಮೂವರು ಮಕ್ಕಳು ಹಳ್ಳದ ನೀರಿಗೆ ಬಿದ್ದು ಮೃತ್ಯು
Update: 2019-10-13 14:31 GMT
ಚಾಮರಾಜನಗರ, ಅ.13: ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟ ಸಮೀಪದ ರಾಮೇಗೌಡನಹಳ್ಳಿಯಲ್ಲಿ ಇಂದು ಸಂಜೆ ನಡೆದಿದೆ.
ಗ್ರಾಮದ ನಿಖಿತಾ(6) ಅನುಪಮಾ(5) ಪ್ರಣಿತಾ(5) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.
ರವಿವಾರ ಅಂಗನವಾಡಿಗೆ ರಜೆಯಾಗಿದ್ದರಿಂದ ಮಕ್ಕಳು ಜಮೀನಿಗೆ ಆಟವಾಡಲು ತೆರಳಿದ್ದರು. ಈ ವೇಳೆ ಮಕ್ಕಳು ಜಮೀನಿನ ಬಳಿ ಹರಿಯುತ್ತಿದ್ದ ಹಳ್ಳದ ಸಮೀಪ ತೆರಳಿದ್ದು, ನೀರಿನ ರಭಸಕ್ಕೆ ಮೂವರೂ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.