ಚಿಕ್ಕಮಗಳೂರು: ಆತ್ಮಹತ್ಯೆ ಮಾಡಿದ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ
ಚಿಕ್ಕಮಗಳೂರು, ಅ.13: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯಲ್ಲಿ ನೆರೆಯಿಂದ ಜಮೀನು ಕಳೆದುಕೊಂಡು ಪರಿಹಾರ ದೊರಕದೆ ನೊಂದು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಉಸ್ತುವಾರಿ ಸಚಿವ ಸಿ.ಟಿ.ರವಿ ರವಿವಾರ ತಲಾ 5 ಲಕ್ಷ ರೂ. ಮೌಲ್ಯದ ಪರಿಹಾರದ ಚೆಕ್ಗಳನ್ನು ವಿತರಣೆ ಮಾಡಿದರು.
ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರೇಗೌಡ ಅವರ ಮನೆಗೆ ಭೇಟಿ ನೀಡಿ ಚೆಕ್ ವಿತರಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ನಂತರ ಕಾರಗದ್ದೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಚನ್ನಪ್ಪಗೌಡ ಅವರ ಮನೆಗೂ ಭೇಟಿ ನೀಡಿ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಚನ್ನಪ್ಪ ಗೌಡರ ಕುಟುಂಬದವರೊಂದಿಗೆ ಮಾತನಾಡಿದ ಸಚಿವ ರವಿ, ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಮಾತ್ರ ಪರಿಹಾರ ನೀಡಬೇಕು ಎಂದು ಇರುವುದರಿಂದ ಇಲ್ಲಿ ಚೆಕ್ ಕೊಡಲು ಸ್ವಲ್ಪ ವಿಳಂಬವಾಗಿದೆ. ಈ ಘಟನೆಯನ್ನು ಒಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಗೆ ಮೃತರ ಪತ್ನಿಗೆ ಮಾಸಿಕ 2 ಸಾವಿರ ರೂ. ಗಳನ್ನು ಕೂಡ ನೀಡಲಾಗುತ್ತದೆ. ಅಲ್ಲದೆ ಸರಕಾರದ ವತಿಯಿಂದ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಈ ಭೂಮಿ ಇನಾಂ ಭೂಮಿಗೆ ಸಂಬಂಧಿಸಿದ ಭೂಮಿಯಾಗಿದೆ. ಇದು ನಮಗೆ ಕಗ್ಗಂಟಾಗಿದೆ. ಮುಂದಿನ ತಿಂಗಳು 5ನೇ ತಾರೀಕು ಇನಾಂ ಭೂಮಿಯ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಆದ್ದರಿಂದ ಈ ಬಗ್ಗೆ ಸರಕಾರ ಸುಪ್ರೀಂ ಕೋರ್ಟ್ಗೆ ಅಫಿದಾವಿತ್ ಸಲ್ಲಿಸಿದರೆ ಪ್ರಯೋಜನ ಆಗಬಹುದು ಎಂದು ತಾ.ಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ ಸಚಿವರ ಗಮನ ಸೆಳೆದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕಾನೂನು ವ್ಯಾಪ್ತಿಯಲ್ಲಿರುವುದರಿಂದ ಸರಕಾರದ ಮಟ್ಟದಲ್ಲಿ ಇನಾಂ ಭೂಮಿಯಲ್ಲಿ ವಾಸ ಮಾಡುತ್ತಿರುವ ರೈತರನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತದೆ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರವಿ, ಸಂಕಷ್ಟದಲ್ಲಿರುವ ರೈತ ಕುಟುಂಬಗಳ ನೆರವಿಗೆ ಬರುವಂತದ್ದು ಸರಕಾರದ ಆದ್ಯ ಕರ್ತವ್ಯ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಎರಡೂ ಕುಟುಂಬಗಳಿಗೂ ಸರಕಾರದ ವತಿಯಿಂದ ತಲಾ ಐದು ಲಕ್ಷ ರೂ. ಚೆಕ್ಗಳನ್ನು ಪರಿಹಾರದ ರೂಪದಲ್ಲಿ ನೀಡಿದ್ದೇವೆ. ನೊಂದವರ ನೆರವಿಗೆ ನಾವು ಸದಾ ಇದ್ದೇವೆ ಎಂದರು.
ಸಣ್ಣ ಬೆಳೆಗಾರರಿಗೆ, ಕಾಫಿ ತೊಟ ಕಳೆದುಕೊಂಡವರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಸಿಎಂ ಬಳಿ ಮನವಿ ಮಾಡಿದ್ದೇನೆ. ಗುಡ್ಡಗಳು ಜರಿದು ಬಿದ್ದು ಮನೆ ಕಳೆದುಕೊಂಡವರಿಗೆ ಮತ್ತು ವಾಸಕ್ಕೆ ಯೋಗ್ಯವಿಲ್ಲದ ಮನೆಗಳಿದ್ದಲ್ಲಿ ಅಂತವರಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡಿ ಅವರಿಗೆ ಮನೆ ಕಟ್ಟಿಕೊಳ್ಳಲು ಬೇಕಾದ ಹಣವನ್ನು ಸರಕಾರದಿಂದ ನೀಡಲಾಗುತ್ತದೆ ಎಂದು ಇದೇ ವೇಳೆ ಅವರು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಪಂ ಅಧ್ಯಕ್ಷ ಕೆ.ಸಿ.ರತನ್,ಬಿಜೆಪಿ ಕಳಸ ಹೋಬಳಿ ಅಧ್ಯಕ್ಷ ಗಿರೀಶ್ ಹೆಮ್ಮಕ್ಕಿ, ಜಿಲ್ಲಾ ಕಾರ್ಯದರ್ಶಿ ತಮ್ಮಯ್ಯ, ಮುಖಂಡರಾದ ರಂಗನಾಥ್, ಜಯಂತ್, ಶ್ರೀಕಾಂತ್, ವೆಂಕಟಸುಬ್ಬಯ್ಯ, ಸುಧಾಕರ್, ನಾಗಭೂಷನ್, ನಾಗೇಶ್ ಭಟ್, ಮಹೇಂದ್ರ, ಮೋಹನ ಇತರರು ಇದ್ದರು.
ಅರಣ್ಯದಲ್ಲಿ ಮನೆ, ಕೃಷಿ ಮಾಡಿದವರಿಗೆ ಏನೂ ಮಾಡಲಾಗುವುದಿಲ್ಲ
ಕಳಸ ಭಾಗದಲ್ಲಿ ಯಾವುದೇ ದಾಖಲಾತಿ ಹೊಂದದೆ ಕೃಷಿ ಮಾಡಿಕೊಂಡ ಅನೇಕ ರೈತ ಜಮೀನುಗಳು ಕೊಚ್ಚಿ ಹೋಗಿವೆ. ಇದಕ್ಕೆ ಯಾವ ರೀತಿಯ ಪರಿಹಾರ ಕೊಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಾಖಲೆಗಳಿರುವ ಭೂಮಿ ಎಷ್ಟು, ದಾಖಲೆಗಳಿಲ್ಲದೇ ಇರುವ ಭೂಮಿ ಎಷ್ಟು ಎನ್ನುವ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಅರಣ್ಯದಲ್ಲಿ ಯಾರೂ ಕೃಷಿ ಮಾಡಿದ್ದಾರೋ ಅವರಿಗೆ ಏನೂ ಮಾಡಲು ಸಾದ್ಯವಿಲ್ಲ. ಅರಣ್ಯ ಇಲ್ಲದೆ ಇರುವ ಭೂಮಿಯಲ್ಲಿ ಕೃಷಿ ಮಾಡಿಕೊಂಡು ನೆರೆಯಿಂದ ಹಾನಿಯಾದವವರ ವರದಿಯನ್ನು ಸರಕಾರದ ಮುಂದಿಡಲಾಗುತ್ತದೆ. ಒಟ್ಟು ಅಂದಾಜು ಸಿಗುವವರೆಗೆ ಏನೂ ಮಾಡಲು ಸಾಧ್ಯವಿಲ್ಲ. ಒಟ್ಟು ಅಂದಾಜು ಸಿಕ್ಕಿದ ಮೇಲೆ ಏನು ಮಾಡಬೇಕು ಅನ್ನುವುದನ್ನು ನಿರ್ಣಯ ಮಾಡುತ್ತೇವೆ ಎಂದು ಹೇಳಿದರು.
ಕಳಸ ತಾಲೂಕಿನ ಗಡಿ ಗುರುತು ಇನ್ನು ಅಂತಿಮ ಆಗಿಲ್ಲ. ಕಳಸ ಹೋಬಳಿಯನ್ನೆ ಕಳಸ ತಾಲೂಕು ಮಾಡಬೇಕು ಎಂಬುದನ್ನು ಸರಕಾರದ ಮುಂದಿಟ್ಟಿದ್ದೇವೆ. ಗೆಜೆಟ್ ನೋಟಿಫಿಕೇಷನ್ ಆದ ಕೂಡಲೇ ತಾಲೂಕು ಕೇಂದ್ರ ಎಂದು ಘೋಷಣೆಯಾಗುತ್ತದೆ. ನಂತರ ತಾಲೂಕು ಮಟ್ಟದ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದರು.