ಕಲಬುರ್ಗಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಹಾಜರುಪಡಿಸದ್ದಕ್ಕೆ ಎಸ್‌ಐಟಿ ಡಿಜಿಗೆ ನೋಟಿಸ್- ಕೋರ್ಟ್ ಎಚ್ಚರಿಕೆ

Update: 2019-10-18 15:49 GMT
ಡಾ.ಎಂ.ಎಂ.ಕಲಬುರ್ಗಿ

ಧಾರವಾಡ, ಅ.18: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ 3ನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ, ಎಸ್‌ಐಟಿ ಡಿಜಿಗೆ ನೋಟಿಸ್ ಜಾರಿ ಮಾಡುವುದಾಗಿ ಮೌಖಿಕ ಎಚ್ಚರಿಕೆ ನೀಡಿದೆ. 

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಂದರ್ಭ ಎಲ್ಲ ಆರೋಪಿಗಳು ಹಾಜರಿರಬೇಕು. ಮೊದಲ ಆರೋಪಿ ಅಮೋಲ್ ಕಾಳೆಯನ್ನು ಎಸ್‌ಐಟಿಯ ಕೋರ್ಟ್ ಮುಂದೆ ಹಾಜರುಪಡಿಸದೆ ತಾಳ್ಮೆ ಪರೀಕ್ಷಿಸುತ್ತಿದೆ. ಮುಂದಿನ ದಿನದಲ್ಲಿ ಎಲ್ಲ ಆರೋಪಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ವಿಶೇಷ ಪ್ರಾಸಿಕ್ಯೂಟರ್ ಅವರಿಗೆ ಸೂಚಿಸಿ, ಇದೆ 24ಕ್ಕೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಸಂಬಂಧ ಸದ್ಯ ನ್ಯಾಯಾಂಗ ವಶದಲ್ಲಿರುವ ಇತರೆ ಆರೋಪಿಗಳಾದ ಗಣೇಶ ಮಿಸ್ಕಿನ್, ಪ್ರವೀಣ ಚತುರೆ, ಅಮಿತ್ ಬದ್ಧಿ, ವಾಸುದೇವ ಸೂರ್ಯವಂಶಿ ಮತ್ತು ಶರದ್ ಬಾಹು ಸಾಹೇಬ್ ಅವರನ್ನು ಹಾಜರುಪಡಿಸಲಾಗಿತ್ತು. ಅನಾರೋಗ್ಯದ ಕಾರಣ ನೀಡಿ ಅಮೋಲ್ ಕಾಳೆಯನ್ನು ಹಾಜರುಪಡಿಸಲಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಮೋಲ್ ಕಾಳೆ ಸದ್ಯ ಮೈಸೂರು ಕಾರಾಗೃಹದಲ್ಲಿದ್ದಾರೆ. ಈ ಮಧ್ಯೆ, ನ್ಯಾಯಾಲಯಕ್ಕೆ ಬಂದ ಆರೋಪಿಗಳು ನಾವು ಅಮಾಯಕರು, ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದರು. ವಿಚಾರಣೆ ನಂತರ ಹೊರ ಬಂದ ಆರೋಪಿಗಳು, ನಮಗೆ ನ್ಯಾಯ ಬೇಕು ಎಂದು ಹಿಂದಿಯಲ್ಲಿ ಅವಲತ್ತುಕೊಂಡು ಪೊಲೀಸ್ ವಾಹನ ಏರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News