ಟಿಪ್ಪುವನ್ನು ವೈಭವೀಕರಿಸಿದವರು ಸಾವರ್ಕರ್ ಹಿಂದೂ ಎಂದಿರುವುದು ಅಚ್ಚರಿ: ಸಚಿವ ಸಿ.ಟಿ.ರವಿ
ವಿಜಯಪುರ, ಅ. 21: ಟಿಪ್ಪು ಸುಲ್ತಾನ್ ವೈಭವೀಕರಿಸಿದವರು ಸಾವರ್ಕರ್ ಅವರನ್ನು ಹಿಂದೂ ಎಂದು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಇಂದಿಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಮತ್ತು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ್ ಸ್ವಾಮೀಜಿಗಳ ವ್ಯಕ್ತಿತ್ವ ತುಲನೆ ಸರಿಯಲ್ಲ. ಇಬ್ಬರಿಗೂ ಭಾರತ ರತ್ನ ನೀಡುವುದರಿಂದ ಪ್ರಶಸ್ತಿ ಮೌಲ್ಯ ಹೆಚ್ಚಲಿದೆ ಎಂದು ಹೇಳಿದರು.
ಕಾಲಪಾನಿ ಶಿಕ್ಷೆಗೆ ಒಳಗಾಗಿದ್ದ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಟಿಪ್ಪು ಸುಲ್ತಾನ್ ವೈಭವೀಕರಿಸುವ ವೇಳೆ ಸಿದ್ದರಾಮಯ್ಯರಿಗೆ ತತ್ವ-ಸಿದ್ಧಾಂತ ಯಾವುದು ಅಡ್ಡಿಯಾಗುವುದಿಲ್ಲ. ಸಾವರ್ಕರ್ ಅವರನ್ನು ಅಪಮಾನ ಮಾಡುತ್ತಿದ್ದಾರೆ ಎಂದು ರವಿ ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲು ಹೊರಟಿದ್ದಾರೆ. ಹೀಗೆ ಮುಂದುವರೆದರೆ ಸುಭಾಶ್ಚಂದ್ರ ಭೋಸ್ ಅವರು ಸ್ವಾತಂತ್ರ ಹೋರಾಟಗಾರರಲ್ಲ ಎಂದರೂ ಅಚ್ಚರಿ ಇಲ್ಲ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.