ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ: ಡಿಸಿಎಂ ಲಕ್ಷ್ಮಣ್ ಸವದಿ

Update: 2019-10-23 16:28 GMT

ಬೆಳಗಾವಿ, ಅ. 23: ‘ಅನರ್ಹ ಶಾಸಕರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಬಗ್ಗೆ ನಾವು ಏಕೆ ಚಿಂತೆ ಮಾಡಬೇಕು. ಅನರ್ಹ ಶಾಸಕರ ಬಗ್ಗೆ ನಾವು ಚಿಂತೆ ಮಾಡುವ ಅಗತ್ಯವೂ ಇಲ್ಲ. ಅವರು ನಮ್ಮ ಪಕ್ಷಕ್ಕೆ ಬರುವ ಬಗ್ಗೆ ನಾವು ಎಲ್ಲಿಯೂ ಹೇಳಿಲ್ಲ ಎಂದರು.

ಕೆ.ಆರ್.ರಮೇಶ್‌ ಕುಮಾರ್ ಅವರು ಸ್ಪೀಕರ್ ಆಗಿದ್ದ ವೇಳೆ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದರೆ, ಅದನ್ನು ಪ್ರಶ್ನಿಸಿದ ಅವರೆಲ್ಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನರ್ಹ ಶಾಸಕರು ತಮಗೆ ನ್ಯಾಯ ಸಿಗಬೇಕೆಂದು, ಕಾಂಗ್ರೆಸ್ ತಮಗೆ ನ್ಯಾಯ ದೊರೆಯಬೇಕೆಂದು ಕೋರ್ಟ್‌ಗೆ ಹೋಗಿದ್ದಾರೆ.

ಇದು ಅವರಿಬ್ಬರ ನಡುವಿನ ವ್ಯಾಜ್ಯ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಹೀಗಿರುವಾಗ ನಾವೇಕೆ ಉತ್ತರ ನೀಡಬೇಕು. ಈ ಕ್ಷಣದ ವರೆಗೂ ಅನರ್ಹ ಶಾಸಕರಿಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಲಕ್ಷ್ಮಣ್ ಸವದಿ ಇದೇ ವೇಳೆ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News