ಗುಂಡ್ಲುಪೇಟೆ: ರೈತನ ಮೃತದೇಹ ಪತ್ತೆ; ಚಿರತೆ ದಾಳಿಗೆ ಬಲಿ ಶಂಕೆ

Update: 2019-10-23 17:04 GMT

ಚಾಮರಾಜನಗರ, ಅ.23: ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಬೇಗೂರು ಸಮೀಪದ ಮಾದಾಪಟ್ಟಣ ಗ್ರಾಮದ ಸಮೀಪದ ಜಮೀನಿನಲ್ಲಿ ಚಿರತೆಯೊಂದು ರೈತರೊಬ್ಬರನ್ನು ಕೊಂದು ಮುಖವನ್ನು ಗುರುತು ಸಿಗದಂತೆ ತಿಂದು ಹಾಕಿದೆ ಎನ್ನಲಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಶುರುವಾಗಿದೆ.

ಬುಧವಾರ ಬೆಳಗ್ಗೆ ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣ ಜಮೀನಿನಲ್ಲಿ ಮುಖದ ಗುರುತು ಪತ್ತೆಯಾಗದ ಕಳೇಬರವೊಂದು ಪತ್ತೆಯಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸಿ ಮೃತರನ್ನು ಮಾದಾಪಟ್ಟಣ ಗ್ರಾಮದ ತಮ್ಮಯ್ಯ ಶೆಟ್ಟಿ(61) ಎಂದು ಗುರುತಿಸಿದರು. ಮೃತದೇಹದ ಸಮೀಪದಲ್ಲಿ ವನ್ಯಜೀವಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. 

ಮಂಗಳವಾರ ಸಂಜೆಯವರೆಗೂ ಗ್ರಾಮದಲ್ಲಿಯೇ ಇದ್ದ ಮೃತರು ಬುಧವಾರ ಮುಂಜಾನೆ ತಮ್ಮ ಜಮೀನಿನತ್ತ ಹೋಗಿದ್ದಾಗ ಚಿರತೆಯೋ ಹುಲಿಯೋ ಎಳೆದೊಯ್ದಿದೆ ಎನ್ನಲಾಗುತ್ತಿದೆ. ಗ್ರಾಮಸ್ಥರು ಅವರ ಬಟ್ಟೆ ಹಾಗೂ ಚಪ್ಪಲಿಗಳನ್ನು ಗುರುತಿಸಿದ್ದಾರೆ. ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News