ಕಾನೂನಿನ ಮೇಲೆ ಗೌರವವಿದೆ, ಹೋರಾಟ ಮುಂದುವರಿಸುತ್ತೇನೆ: ಡಿ.ಕೆ.ಶಿವಕುಮಾರ್
ಹೊಸದಿಲ್ಲಿ, ಅ. 24: ‘ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಜನರ ಬೆಂಬಲ ಸಿಕ್ಕಿದೆ. ಕಷ್ಟಕಾಲದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ನನಗೆ ಕಾನೂನಿನ ಮೇಲೆ ಗೌರವವಿದೆ. ನನ್ನ ಹೋರಾಟ ಮುಂದುವರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ನಮ್ಮ ವಕೀಲರು ಹಾಗೂ ನಾಯಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ನಂತರ ಬೆಂಗಳೂರಿಗೆ ತೆರಳುತ್ತೇನೆ. ಬೆಳಗ್ಗೆ ನಮ್ಮ ತಾಯಿ ಹಾಗೂ ಪತ್ನಿಯ ವಿಚಾರಣೆ ಇತ್ತು. ಅದು ಅ.30ಕ್ಕೆ ಮುಂದೂಡಿಕೆಯಾಗಿದೆ. ಈಡಿ ಅ.31ಕ್ಕೆ ಸಮನ್ಸ್ ನೀಡಬೇಕೆಂದುಕೊಂಡಿದೆ. ನಾವು ವಿಚಾರಣೆಯನ್ನು ಬೆಂಗಳೂರಿನಲ್ಲೇ ಮಾಡಿ ಎಂದು ಕೋರಿದ್ದೇವೆ. ಅವರು ಏನೇ ಮಾಡಲಿ ಉತ್ತರ ಕೊಡಲು ನಾವು ತಯಾರಿದ್ದೇವೆ. ಈಗ ನನ್ನ ಪರ ವಾದ ಮಾಡಿರುವ ವಕೀಲರನ್ನು ಭೇಟಿ ಮಾಡಬೇಕಿದೆ. ಅವರು ಕೋರ್ಟ್ಗಳಲ್ಲಿ ಇರುವುದರಿಂದ ಮಧ್ಯಾಹ್ನ ಅವರ ಸಮಯ ಕೇಳಿದ್ದು ಮನೆಗೆ ಹೋಗಿ ಭೇಟಿ ಮಾಡಬೇಕು. ಅದು ನನ್ನ ಕರ್ತವ್ಯ. ನಂತರ ನಮ್ಮ ನಾಯಕರನ್ನು ಭೇಟಿ ಮಾಡಿ ಬೆಂಗಳೂರಿನತ್ತ ಪ್ರಯಾಣ ಮಾಡುತ್ತೇನೆ ಎಂದರು.
ನಾನು ನಂಬಿದಂತಹ ನನ್ನ ಶಕ್ತಿ ನಮ್ಮ ಜನರನ್ನು ಭೇಟಿ ಮಾಡಬೇಕಾಗಿದೆ. ಮಾಧ್ಯಮದವರೂ ನನ್ನ ಪರವಾಗಿದ್ದು ನಿಮ್ಮನ್ನು ಭೇಟಿ ಮಾಡುತ್ತೇನೆ. ನಿಮ್ಮ ಕರ್ತವ್ಯ ನೀವು ಮಾಡಿದ್ದೀರಿ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿಮಗೆ ಬಿಟ್ಟಿದ್ದೇನೆ. ನಾನು ಈಗ ಮೊದಲು ಮಾಡಬೇಕಾಗಿರುವುದು ಉಪಕಾರ ಸ್ಮರಣೆ. ನನ್ನ ಪರವಾಗಿ ನಿಂತವರನ್ನು ಭೇಟಿ ಮಾಡಿ ಅವರಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸದಿದ್ದರೆ ನಾನು ಮನುಷ್ಯನಾಗಲು ಸಾಧ್ಯನಾ? ಎಷ್ಟೋ ಜನ ರಸ್ತೆಯಲ್ಲಿ ನಿಂತು, ಬಂದ್ ಮಾಡಿ, ನನ್ನ ಪರ ಪ್ರತಿಭಟನೆ ಮಾಡಿ, ಮನೆಯಲ್ಲಿ ಕೂತು ಧ್ಯಾನ ಮಾಡಿ, ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.
ಕೇವಲ ಕಾಂಗ್ರೆಸ್ ಪಕ್ಷದವರು ಮಾತ್ರವಲ್ಲ. ಕೆಲವು ಬಿಜೆಪಿ ನಾಯಕರು ಸೇರಿದಂತೆ ಎಲ್ಲ ಪಕ್ಷದವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಜೆಡಿಎಸ್ನವರು ನನಗೆ ಬೆಂಬಲಿಸಿದ್ದಾರೆ. ಇನ್ನು ಕಾಂಗ್ರೆಸ್ನವರು ನನ್ನ ಕುಟುಂಬ. ಎಲ್ಲರು ಮನಸ್ಸು ಬಿಚ್ಚಿ ಪ್ರೀತಿ ತೋರಿದ್ದಾರೆ. ಆದರೆ ಕೆಲವರು ಮಾತ್ರ ನನ್ನ ಪರಿಸ್ಥಿತಿ ನೋಡಿ ಖುಷಿ ಪಟ್ಟಿದ್ದಾರೆ. ಏನು ಮಾಡಕ್ಕೆ ಆಗಲ್ಲ. ಅವರೆಲ್ಲ ಇರಬೇಕು. ಅವರಿಂದಲೇ ನಾವು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ನನಗೆ ಅವರ ಮೇಲೆ ಯಾವುದೇ ಬೇಸರ ಇಲ್ಲ ಎಂದು ಅವರು ಹೇಳಿದರು.
ನಾನು ವಿಧಾನಸಭೆಯಲ್ಲಿ ಹೇಳಿ ಬಂದಿದ್ದೆ. ನನಗೆ ಏನೇನಾಗುತ್ತಿದೆ ಎಂಬುದು ಗೊತ್ತಿತ್ತು. ಹೀಗಾಗಿ ಮುಚ್ಚು-ಮರೆ ಮಾಡುವುದಿಲ್ಲ. ಯಾರ್ಯಾರ ಒತ್ತಡವಿತ್ತು. ಯಾರ್ಯಾರು ಏನೇನು ಆಫರ್ ನೀಡಿದ್ದರು. ಆದರೂ ನಾನೇ ನನಗೆ ಸಮನ್ಸ್ ನೀಡಿದ ತಕ್ಷಣ ಒಂದು ನಿಮಿಷ ವ್ಯರ್ಥ ಮಾಡದೇ ಮಧ್ಯಾಹ್ನ ದಿಲ್ಲಿಗೆ ಬಂದು ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದ್ದೇನೆ.
ನನ್ನ ಮಗಳಿಗೂ ಹೇಳಿದೆ. ನೀನು ವಿದ್ಯಾವಂತೆ ಇದ್ದೀಯಾ. ನಿನಗೇನು ಗೊತ್ತೋ ಅದನ್ನು ಹೇಳಿ ಅಧಿಕಾರಿಗಳಿಗೆ ಉತ್ತರ ನೀಡು ಅಂತಾ ಹೇಳಿದೆ. ಆಕೆಯೂ ಉತ್ತರ ನೀಡಿದ್ದಾಳೆ. ನನ್ನ ತಾಯಿ ಅವರಿಗೆ ವಯಸ್ಸಿನ ಸಮಸ್ಯೆ ಇದೆ. ಪ್ರಯಾಣ, ಭಾಷೆ ಸೇರಿ ಕೆಲವು ಸಮಸ್ಯೆಗಳು ಇವೆ. ನಾವು ಕೋರ್ಟ್ಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಅವರ ಪ್ರಯತ್ನ ಅವರು ಮಾಡಲಿ. ನನ್ನ ಪ್ರಯತ್ನ ನಾನು ಮಾಡ್ತೀನಿ ಎಂದರು.
ನಾನು ಯಾರನ್ನು ಭೇಟಿ ಮಾಡ್ತೀನಿ ಅಂತಾ ಹೇಳಲು ಕಷ್ಟ. ಪಕ್ಷಭೇದ ಮರೆತು ಅನೇಕರು ಬೆಂಬಲಿಸಿದ್ದಾರೆ. ಸಿಪಿಎಂ, ಸಿಪಿಎಂ, ಟಿಎಂಸಿ, ಜನತಾದಳ ಸೇರಿ ಅನೇಕ ನಾಯಕರುಗಳು ನನ್ನ ಬೆಂಬಲಿಸಿದ್ದಾರೆ. ಕೇರಳದಲ್ಲಿ ರಾತ್ರೋರಾತ್ರಿ ಪಂಜಿನ ಮೆರವಣಿಗೆ ಮಾಡಿದ್ದಾರೆ. ನಾನು ಈಡಿ ಕಚೇರಿಯಲ್ಲಿ, ಪೊಲೀಸ್ ಠಾಣೆಯಲ್ಲಿದ್ದಾಗ ಪ್ರತಿದಿನ ಮುನ್ನೂರು-ನಾನೂರು ಜನ ಹುಡುಗರು ಬರುತ್ತಿದ್ದರು. ನನ್ನನ್ನು ಕಾಯುತ್ತಾ ತಿಂಗಳುಗಟ್ಟಲೇ ಇಲ್ಲೇ ಸೇರಿಕೊಂಡಿದ್ದಾರೆ. ರಸ್ತೆಗಿಳಿದು ಹೋರಾಟ ಮಾಡಿದ್ದಾರೆ. ವಿವಿಧ ಮಠದ ಸ್ವಾಮಿಗಳು ಕೋರ್ಟ್ಗೆ ಆಗಮಿಸಿ ಭೇಟಿ ಮಾಡಿದ್ದರು. ಅವರೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾರ್ಥನೆ ಫಲ ಇವೆಲ್ಲವೂ ಸೇರಿ ನನಗೆ ಶಕ್ತಿ ಕೊಟ್ಟಿದ್ದಾರೆ. ನಾನು ಕಾನೂನಿಗೆ ಬದ್ಧನಾಗಿರುವ ಪ್ರಜೆ. ಏಳು ಬಾರಿ ಶಾಸಕನಾಗಿದ್ದೇನೆ. ನಾವು ಕಾನೂನುಗಳನ್ನು ಮಾಡಿದ್ದೇವೆ. ಅವುಗಳನ್ನು ನಾವು ಗೌರವಿಸಬೇಕಿದೆ. ಚುನಾವಣಾ ಆಯೋಗ ಕೇಳಿರುವುದನ್ನು ನಾನು ಘೋಷಿಸಿದ್ದೇನೆ. ಈ ವಿಚಾರಗಳೆಲ್ಲವನ್ನು ನಾನು ಬೆಂಗಳೂರಿನಲ್ಲಿ ಮಾತನಾಡುತ್ತೇನೆ ಎಂದು ಅವರು ಹೇಳಿದರು.
‘ಬೇರೆಯವರ ಆಸ್ತಿ ಘೋಷಣೆ, ನನ್ನ ಆಸ್ತಿ ಘೋಷಣೆ ಎಲ್ಲದರ ಬಗ್ಗೆ ಹೇಳುತ್ತೇನೆ. ನನ್ನ ಅನೇಕ ಸ್ನೇಹಿತರು ನನಗೆ ಒಳ್ಳೆಯ ಸಲಹೆಗಳನ್ನು ನೀಡಿದ್ದಾರೆ. ಕೆಲವರು ವ್ಯವಹಾರ ಮಾಡು, ಸನ್ಯಾಸತ್ವ ತಗೋ, ಕೆಲವನ್ನು ಬಿಡಬೇಕು ಎಂದಿದ್ದಾರೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ’
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ