ಜನವರಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ ಹುಬ್ಬಳ್ಳಿ ಸಮ್ಮೇಳನ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2019-10-25 16:12 GMT

ಬೆಂಗಳೂರು, ಅ.25: 2020ರ ಜನವರಿ 17ರಂದು ಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ ಹುಬ್ಬಳ್ಳಿ ಸಮ್ಮೇಳನ ನಡೆಯಲಿದ್ದು, ಈ ಸಂಬಂಧ ಇಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶಶ್ ಶೆಟ್ಟರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಶುಕ್ರವಾರ ಕುಮಾರ ಕೃಪ ಅತಿಥಿ ಗೃಹದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮ ತೆರೆಯಲು ಪ್ರಸಕ್ತವಾದ ವಾತಾವರಣವಿದೆ. ಜೊತೆಗೆ ಆ ಭಾಗದಲ್ಲಿ ಕೌಶಲ್ಯ ತರಬೇತಿ ನೀಡುವುದರಿಂದ ಮಾನವ ಸಂಪನ್ಮೂಲ ಕೂಡ ಹೆಚ್ಚಲಿದೆ ಎಂದರು.

ಸಾರಿಗೆ ಸಂಪರ್ಕಕ್ಕೆ ವಿಮಾನ ನಿಲ್ದಾಣವೂ ಇರುವುದರಿಂದ ಉದ್ಯಮಿಗಳಿಗೆ ಇಲ್ಲಿ ಹೂಡಿಕೆ ಮಾಡಲು ಸೂಕ್ತ ರೀತಿಯ ವ್ಯವಸ್ಥೆಯೂ ಆಗಲಿದೆ. ಈ ನಿಟ್ಟಿನಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮ್ಮೇಳನ ಮಾಡಲಾಗುತ್ತಿರುವ ಬಗ್ಗೆ ಅವರು ಪ್ರಸ್ತಾಪಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಈ ಭಾಗದಲ್ಲಿ ಕೌಶಲ್ಯ ತರಬೇತಿ ಕೇಂದ್ರ ತೆರೆಯುವುದರಿಂದ ಈ ಭಾಗದ ಯುವಕರಿಗೆ ವೃತ್ತಿಪರ ತರಬೇತಿ ನೀಡಿ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ತರಬೇತಿ ಜೊತೆಗೆ ಉದ್ಯೋಗದಲ್ಲಿ ಖಾತ್ರಿ ಸಹ ನೀಡಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಗಮನಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಹುಬ್ಬಳ್ಳಿ ಭಾಗದಲ್ಲಿ ಯಾವ ಸೆಕ್ಟರ್ ಕೈಗಾರಿಕೆಗೆ ಪೂರಕ ವಾತಾವರಣವಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ. ರಕ್ಷಣೆ(ಡಿಫೆನ್ಸ್) ಅಥವಾ ಇತರೆ ಕೈಗಾರಿಕಾ ತಯಾರಿಕಾ ಘಟಕ ನಿರ್ಮಾಣಕ್ಕೆ ಈ ಪ್ರದೇಶ ಪ್ರಸಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಪ್ರಾಯ ಸಂಗ್ರಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ಕೈಗಾರಿಕಾ ಮುಖ್ಯಸ್ಥರು, ಕೈಗಾರಿಕಾ ಸಂಘಸಂಸ್ಥೆಗಳಿಗೆ ಸಂಬಂಧಪಟ್ಟವರೊಂದಿಗೆ ಪ್ರಾಥಮಿಕ ಸಭೆ ಆಯೋಜಿಸುವಂತೆಯೂ ಅವರು ಸೂಚಿಸಿದರು.

ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮ್ಮೇಳನದ ಭಾಗವಾಗಿ ನವೆಂಬರ್ ತಿಂಗಳಿಂದ ಜನವರಿವರೆಗೂ ಹೈದರಾಬಾದ್-ಕರ್ನಾಟಕ, ಮುಂಬೈ-ಕರ್ನಾಟಕ ಭಾಗದಲ್ಲಿ ರೋಡ್ ಶೋ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು. ಜನವರಿ ತಿಂಗಳಲ್ಲಿ ನಡೆಯುವ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಉದ್ದಿಮೆದಾರರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಜೊತೆಗೆ ವಿವಿಧ ಸೆಕ್ಟರ್‌ಗಳ ಕುರಿತು ವಿಚಾರ ಸಂಕಿರಣ ಕೂಡ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News