ಬಿಜೆಪಿ ರೈಲು ಇದ್ದಂತೆ, ಯಾರು ಬೇಕಾದರೂ ಪ್ರಯಾಣಿಸಬಹುದು: ಸುರೇಶ್ ಅಂಗಡಿ
Update: 2019-10-29 14:15 GMT
ಬೆಳಗಾವಿ, ಅ.29: ಬಿಜೆಪಿ ಪಕ್ಷವು ರೈಲುಗಾಡಿ ಇದ್ದಂತೆ, ಯಾರು ಬೇಕಾದರೂ ಇದರಲ್ಲಿ ಪ್ರಯಾಣ ಬೆಳೆಸಬಹುದು ಎಂದು ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರಕ್ಕೆ ಬೆಂಬಲ ನೀಡಿರುವುದು ಸ್ವಾಗತಾರ್ಹ. ಅಷ್ಟೇ ಅಲ್ಲದೆ, ಬಿಜೆಪಿ ಪಕ್ಷವು ರೈಲು ಗಾಡಿ ಇದ್ದಂತೆ, ನಮ್ಮ ಪಕ್ಷಕ್ಕೆ ಯಾರು ಬೆಂಬಲ ನೀಡುತ್ತಾರೋ ಅವರನ್ನು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಪಕ್ಷ ಜೊತೆಗೂಡಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿತ್ತು. ಯಡಿಯೂರಪ್ಪ ಸರಕಾರ ಅಧಿಕಾರದಲ್ಲಿದ್ದರೆ, ಕರ್ನಾಟಕ ಅಭಿವೃದ್ಧಿಯಾಗುತ್ತದೆ ಎನ್ನುವ ವಿಶ್ವಾಸದಲ್ಲಿ ಕುಮಾರಸ್ವಾಮಿ ಅವರು ಇತ್ತೀಚಿಗೆ ಹೇಳಿಕೆ ನೀಡಿರಬಹುದು ಎಂದು ಅವರು ಹೇಳಿದರು.