ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಮತ್ತೊಂದು ಪೆಲಿಕಾನ್ ಪಕ್ಷಿ ಸಾವು; ಹಕ್ಕಿ ಜ್ವರದ ಶಂಕೆ

Update: 2019-10-29 18:12 GMT
ಸಾಂದರ್ಭಿಕ ಚಿತ್ರ

ಮೈಸೂರು,ಅ.29: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಮತ್ತೊಂದು ಪೆಲಿಕಾನ್ ಪಕ್ಷಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅ.26 ರಂದು ಒಂದು ಸ್ಪಾಟ್ ಬಿಲ್ ಪೆಲಿಕಾನ್ ಸಾವನ್ನಪ್ಪಿತ್ತು. ಇದೀಗ ಮತ್ತೊಂದು ಹೆಜ್ಜಾರ್ಲೆ ಹೆಸರಿನ ಪೆಲಿಕಾನ್ ಪಕ್ಷಿ ಸಾವನ್ನಪಿದೆ. ಎರಡು ದಿನಗಳ ಅಂತರದಲ್ಲಿ ಎರಡನೇ ಪೆಲಿಕಾನ್ ಮೃತಪಟ್ಟಿದ್ದು, ಪೆಲಿಕಾನ್ ಸಾವಿಗೆ ಅಧಿಕಾರಿಗಳು ಮೂರು ಕಾರಣಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಹಕ್ಕಿಜ್ವರ, ಕಲುಷಿತ ನೀರು, ಸೊಂಕಿನಿಂದಾಗಿ ಸಾವನ್ನಪ್ಪಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ವಿದೇಶಿ ಹಕ್ಕಿಗಳು ವಲಸೆ ಬರುವ ಸಮಯದಲ್ಲೆ ಪೆಲಿಕಾನ್ ಕಳೇಬರವನ್ನು ಬೆಂಗಳೂರು ಲ್ಯಾಬ್‍ಗೆ ರವಾನೆ ಮಾಡಲಾಗಿದ್ದು ಲ್ಯಾಬ್ ವರದಿ ಬಂದ ನಂತರ ಪೆಲಿಕಾನ್ ಸಾವಿಗೆ ನಿಖರ ಕಾರಣ ಬಹಿರಂಗವಾಗಲಿದೆ.

ಕಳೆದ 2017ರಲ್ಲಿ ಹಕ್ಕಿಜ್ವರದಿಂದಾಗಿ ಚಾಮರಾಜೇಂದ್ರ ಮೃಗಾಲಯ ಬಂದ್ ಆಗಿತ್ತು. ಒಂದು ತಿಂಗಳ ಕಾಲ ಮೃಗಾಲಯ ಬಂದ್ ಮಾಡಿ ಹಕ್ಕಿಜ್ವರವನ್ನು ನಿವಾರಣೆ ಮಾಡಲಾಗಿತ್ತು. ಇದೀಗ ಮತ್ತೆ ಹಕ್ಕಿಜ್ವರದ ಆತಂಕ ಎದುರಾಗಿದೆ.

ಈ ಬಗ್ಗೆ ಮಾತನಾಡಿರುವ ಮೃಗಾಲಯ ನಿರ್ದೇಸಕ ಅಜಿತ್ ಕುಲಕರ್ಣಿ, ಈಗಾಗಲೇ  ಪಕ್ಷಿ ಮೃತದೇವಹವನ್ನು ಲ್ಯಾಬ್‍ಗೆ ಕಳಿಸಲಾಗಿದೆ. ಹಕ್ಕಿಜ್ವರದಿಂದ ಮೃತಪಟ್ಟಿದೆ ಎಂದು ಈಗಾಗಲೇ ಹೇಳಲು ಸಾಧ್ಯವಿಲ್ಲ. ವರದಿ ಬಂದ ನಂತರ ಗೊತ್ತಾಗಲಿದೆ. ಈಗಾಗಲೇ ಮೃಗಾಲಯದಲ್ಲೂ ಸಹ ಎಚ್ಚರ ವಹಿಸಲಾಗಿದೆ. ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಈಗ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News