ಕೊಪ್ಪಳ ವಿದ್ಯುತ್ ಅವಘಡ: ವಿದ್ಯಾರ್ಥಿ ನಿಲಯಗಳ ಸುರಕ್ಷತೆ ಬಗ್ಗೆ ವರದಿ ಸಲ್ಲಿಸಿ- ಹೈಕೋರ್ಟ್

Update: 2019-10-30 16:39 GMT

ಬೆಂಗಳೂರು, ಅ.30: ಕೊಪ್ಪಳದ ವಿದ್ಯಾರ್ಥಿ ನಿಲಯದಲ್ಲಿ ಆ.18ರಂದು ವಿದ್ಯುತ್ ಅವಘಡ ಸಂಭವಿಸಿ 5 ವಿದ್ಯಾರ್ಥಿಗಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ವಿದ್ಯಾರ್ಥಿ ನಿಲಯಗಳಲ್ಲಿನ ಮೂಲಸೌಕರ್ಯ, ಸುರಕ್ಷತಾ ಕ್ರಮಗಳ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್‌ನ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ಸದಸ್ಯರಾದ ಪಿ.ಪಿ.ಪಿ ಬಾಬುರಾಜು ಹಾಗೂ ಆರ್. ಜಗನ್ನಾಥ್ ಬರೆದಿದ್ದ ಪತ್ರ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪಿಐಎಲ್ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳು ಎಷ್ಟು. ಅವುಗಳಲ್ಲಿ ಎಷ್ಟು ನಿಲಯಗಳು ಖಾಸಗಿ ಕಟ್ಟಡದಲ್ಲಿವೆ ಹಾಗೂ ಸರಕಾರಿ ಕಟ್ಟಡದಲ್ಲಿವೇ ಎಂಬ ವಿವರಣೆ ನೀಡಬೇಕು. ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಏನಾದರೂ ರೂಪಿಸಿದ್ದರೆ ಅವುಗಳ ಬಗ್ಗೆ ವಿವರವಾದ ವರದಿ ನೀಡಬೇಕೆಂದು ನ್ಯಾಯಪೀಠವು ರಾಜ್ಯ ಸರಕಾರಕ್ಕೆ ತಿಳಿಸಿ, ವಿಚಾರಣೆಯನ್ನು ಮುಂದೂಡಿದೆ.

ಬನ್ನಿಕಟ್ಟೆಯ ಖಾಸಗಿ ಕಟ್ಟಡ ಬಾಡಿಗೆಗೆ ಪಡೆದು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ನಡೆಸಲಾಗುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ಹಾಸ್ಟೆಲ್‌ನಲ್ಲಿ ಧ್ವಜಾರೋಹಣ ನಡೆಸಲಾಗಿತ್ತು. ಆ.18ರಂದು ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಬಸವರಾಜ, ದೇವರಾಜ, ಕುಮಾರ್ ಹಾಗೂ ಗಣೇಶ್ ಧ್ವಜಸ್ತಂಭ ತೆರವು ಮಾಡಲು ಮುಂದಾಗಿದ್ದಾಗ ಪಕ್ಕದಲ್ಲೆ ಹಾದುಹೋಗಿದ್ದ ವಿದ್ಯುತ್ ಕಂಬದ ತಂತಿ ಧ್ವಜ ಕಂಬಕ್ಕೆ ಸ್ಪರ್ಶಿಸುತ್ತಲೇ ವಿದ್ಯುತ್ ಪ್ರವಹಿಸಿ ಐವರೂ ಸಾವಿಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News