ರಾಜ್ಯದಲ್ಲಿ ನೂತನ ಜವಳಿ ನೀತಿಗೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು, ಅ. 31: ರಾಜ್ಯದಲ್ಲಿ ಉದ್ಯೋಗ ಸೃಜನೆ ದೃಷ್ಟಿಯಲ್ಲಿಟ್ಟುಕೊಂಡು 2019-2024ರ ನೂತನ ಜವಳಿ ನೀತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಟೆಕ್ಸ್ಟೈಲ್ ಮತ್ತು ಸಿದ್ದ ಉಡುಪು ಕ್ಷೇತ್ರದ ಪ್ರೋತ್ಸಾಹಕ್ಕೆ ವಿಶೇಷ ಸಬ್ಸಿಡಿ ನೀಡಲು ನೂತನ ಜವಳಿ ನೀತಿ ರೂಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ, ಹೈ.ಕ.ಭಾಗ ಹೊರತುಪಡಿಸಿ ಇತರೆ ಹಿಂದುಳಿದ ಜಿಲ್ಲೆಗಳ ಮಹಾನಗರ ಪಾಲಿಕೆ ವ್ಯಾಪ್ತಿ, ಇತರೆ ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಸೇರಿದಂತೆ ಒಟ್ಟಾರೆ 4 ವಿಭಾಗಗಳನ್ನು ಮಾಡಿಕೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಅದಿರು ರಫ್ತು ನಿಷೇಧ: ರಾಜ್ಯದಲ್ಲಿ ಕಬ್ಬಿಣದ ಅದಿರು ರಫ್ತು ನಿಷೇಧಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದ ಮಾಧುಸ್ವಾಮಿ, ರಾಜ್ಯದಲ್ಲಿನ ಕೈಗಾರಿಕೆಗಳಿಗೆ ಅದಿರು ಪೂರೈಕೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸ್ಥಗಿತಗೊಂಡಿರುವ ಅದಿರು ಘಟಕಗಳನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಕನ್ನಡಿಗರಿಗೆ ಆದ್ಯತೆ: ಔದ್ಯೋಗಿಕ ನಿಯಮಾವಳಿಗೆ ತಿದ್ದುಪಡಿ ಮಾಡಿ ರಾಜ್ಯದ ಕೈಗಾರಿಕೆಗಳಲ್ಲಿನ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳಿಗೆ ಕನ್ನಡಿಗರಿಗೆ ಆದ್ಯತೆ ನೀಡಿ, ವಿಕಲಚೇತರಿಗೆ ಶೇ.5ರಷ್ಟು ಮೀಸಲಾತಿ ನೀಡಬೇಕು. ಲೋಕೋಪಯೋಗಿ ಇಲಾಖೆಯಲ್ಲಿನ ಖಾಲಿ ಇರುವ ಸಿವಿಲ್ ಎಂಜಿನಿಯರ್ ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಭರ್ತಿ ಮಾಡಿಕೊಳ್ಳಲು ಸಚಿವ ಸಂಪುಟ ಸಮ್ಮತಿಸಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 18 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ. ಚಾಮರಾಜನಗರ ಜಿಲ್ಲೆ ಗಾಳಿಪುರದ ದೀನಬಂಧು ಟ್ರಸ್ಟ್ಗೆ 3 ಎಕರೆ ಭೂಮಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಪಶುವೈದ್ಯರ ನೇಮಕ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಶುವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ 80 ಪಶು ವೈದ್ಯಕೀಯ ಸಹಾಯಕರು ಹಾಗೂ 61 ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಮವಸ್ತ್ರ: ರಾಜ್ಯದಲ್ಲಿನ 37 ಲಕ್ಷ ವಿದ್ಯಾರ್ಥಿಗಳಿಗೆ ತಲಾ 250 ರೂ.ವೆಚ್ಚದಲ್ಲಿ ಮತ್ತೊಂದು ಜೊತೆ ಸಮವಸ್ತ್ರ ನೀಡಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ. ರಾಯಚೂರು, ಕೊಡಗು ಹಾಗೂ ಕಾರವಾರ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ. ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಬೂಟ್ಸ್, ಕಾಲುಚೀಲ, ಬೆಲ್ಟ್ ಸಹಿತ ಇನ್ನಿತರ ವಸ್ತುಗಳನ್ನು ನೀಡಲು 11.75 ಕೋಟಿ ರೂ.ಗೆ ಸಂಪುಟ ಸಮ್ಮತಿಸಿದೆ. ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗೆ 160 ಕೋಟಿ ರೂ.ನೀಡಲು ಸಂಪುಟ ಅಸ್ತು ಎಂದಿದೆ ಎಂದು ತಿಳಿಸಿದರು.
ಗೋಶಾಲೆಗೆ ನೀತಿ: ಜಾನುವಾರುಗಳ ಸಂರಕ್ಷಣೆ ದೃಷ್ಟಿಯಿಂದ ಗೋಶಾಲೆ ನಿರ್ವಹಣೆ ಹಾಗೂ ಮೇವು ಬ್ಯಾಂಕ್ ಸ್ಥಾಪನೆಗೆ ನೀತಿ ರೂಪಿಸಲು ಸಚಿವ ಸಂಪುಟ ನಿರ್ಧರಿಸಿದೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಾಂಶುಪಾಲರು, ಸಹಾಯಕ ಪ್ರಾಧ್ಯಾಪಕರು ಸೇರಿ ಒಟ್ಟು 2,203 ಮಂದಿ ನೇಮಕಕ್ಕೆ ಒಪ್ಪಿಗೆ ನೀಡಿದೆ.
ಬೆಂಗಳೂರಿನ ಮಾವಳ್ಳಿಪುರ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೇರಿದ 46 ಎಕರೆ ಪೈಕಿ 20 ಎಕರೆ ಭೂಮಿಯನ್ನು ಎನ್ಇಜಿ ಸಂಸ್ಥೆಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆಗೆ 25 ವರ್ಷಕ್ಕೆ ಭೋಗ್ಯಕ್ಕೆ ನೀಡಲು ಸಂಪುಟ ಅನುಮೋದನೆ ನೀಡಿದೆ ಎಂದು ಮಾಧುಸ್ವಾಮಿ ವಿವರ ನೀಡಿದರು.