ನಾಲ್ಕು ತಿಂಗಳ ಸಂಬಳ ನೀಡದ ಆರೋಪ: ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಬಿಎಸ್ಎನ್ಎಲ್ ನೌಕರ
Update: 2019-11-02 17:11 GMT
ಕೊಳ್ಳೇಗಾಲ,ನ.2: ಕಳೆದ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿ ಬಿಎಸ್ಎನ್ಎಲ್ ನೌಕರನೊಬ್ಬ ಬಿಎಸ್ಎನ್ಎಲ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೂರಪೂರ ಗ್ರಾಮದಲ್ಲಿ ವರದಿಯಾಗಿದೆ.
ತಾಲೂಕಿನ ಸೂರಪೂರ ಗ್ರಾಮದ ತಮ್ಮೇಗೌಡರ ಮಗ ರವಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಹೋಗಿ, ಒಂದೂವರೆ ಗಂಟೆಗಳ ಕಾಲ ಟವರ್ ಏರಿ ಕುಳಿತಿದ್ದ ರವಿಯ ಮನವೊಲಿಸಿ ಟವರ್ನಿಂದ ಇಳಿಸಿದರು. ನಂತರ ಬಿಎಸ್ಎನ್ಎಲ್ ಅಧಿಕಾರಿಯನ್ನು ಠಾಣೆಗೆ ಕರೆಸಿ ಆತನ ಬೇಡಿಕೆಯಂತೆ ನಾಲ್ಕು ತಿಂಗಳ ಸಂಬಳ ಹಾಗೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ತಿಳಿಸಿದಾಗ, ಸಂಬಳ ನೀಡುತ್ತೇವೆ. ಆದರೆ ಕೆಲಸಕ್ಕೆ ಮತ್ತೆ ತೆಗೆದುಕೊಳ್ಳಲು ಮೇಲಾಧಿಕಾರಿ ಅನುಮತಿ ಕೋರುತ್ತೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಡಿವೈಎಸ್ಪಿ ನವೀನ್ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಎಸ್ಐ ಅಶೋಕ್ ಕುಮಾರ್ ಇದ್ದರು.