ಅಪಘಾತದಲ್ಲಿ ಬೈಕ್ ಸವಾರ ಸಾವು: ಬಸ್ ಚಾಲಕನಿಗೆ 1 ವರ್ಷ ಕಾರಾಗೃಹ ಶಿಕ್ಷೆ
Update: 2019-11-03 15:30 GMT
ಕಲಬುರಗಿ, ನ.3: ನಗರದ ರಾಮಮಂದಿರದ ಬಳಿ ಬೈಕ್ ಸವಾರನಿಗೆ ಢಿಕ್ಕಿ ಹೊಡೆದು ಆತನ ಸಾವಿಗೆ ಕಾರಣನಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ಡಿಪೊದ ಚಾಲಕ ರಂಗು ಕಸಬಾಗೆ ಕಲಬುರಗಿ 1ನೆ ಹಚ್ಚುವರಿ ಜೆಎಂಎಫ್ಸಿ ಕೋರ್ಟ್ 1 ವರ್ಷ 3 ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ 4 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕಳೆದ ಎ.30ರಂದು ಕಲಬುರಗಿಯಿಂದ ರಂಗು ಸಂಸ್ಥೆಯ ಬಸ್ ಚಲಾಯಿಸಿಕೊಂಡು ವಿಜಯಪುರದತ್ತ ಹೊರಡುತ್ತಿದ್ದಾಗ ಬೈಕ್ ಸವಾರ ರುಕ್ಮಣಪ್ಪ ಅವರಿಗೆ ಢಿಕ್ಕಿ ಹೊಡೆಸಿದ್ದರು ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ರುಕ್ಮಣಪ್ಪ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಕಲಬುರಗಿ ಸಂಚಾರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸರಕಾರದ ಪರವಾಗಿ ಪ್ರಭಾರ ಸಹಾಯಕ ಸರಕಾರಿ ಅಭಿಯೋಜಕಿ ಜಯಶ್ರೀ ವಾದ ಮಂಡಿಸಿದ್ದರು.