ದ್ವೇಷ ರಾಜಕಾರಣ ಮಾಡಲ್ಲ ಎಂದ ಬಿಎಸ್‌ವೈ ಮಾತಿಗೆ ತಪ್ಪಿದ್ದಾರೆ: ಹೆಚ್.ಡಿ.ದೇವೇಗೌಡ

Update: 2019-11-08 12:24 GMT

ತುಮಕೂರು,ನ.8: ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ ಯಡಿಯೂರಪ್ಪ, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹೆಚ್ಡಿಕೆ ಕಾಲದಲ್ಲಿ ಬಿಡುಗಡೆಯಾದ 40 ಕೋಟಿ ರೂ ಅನುದಾನ ತಡೆಹಿಡಿಯುವ ಮೂಲಕ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಆರೇಹಳ್ಳಿ ಗ್ರಾಮದ ದೊಡ್ಡಮ್ಮ, ಚಿಕ್ಕಮ್ಮ ಹಾಗೂ ಆಂಜನೇಯಸ್ವಾಮಿ ದೇವಾಲಯದ ಉದ್ಘಾಟನೆಗೆ ಹಾಗೂ ಶಿಲಾ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ 59 ವರ್ಷಗಳ ರಾಜಕಾರಣದಲ್ಲಿ ಎಂದಿಗೂ ಈ ರೀತಿಯ ದ್ವೇಷದ ರಾಜಕಾರಣ ಮಾಡಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಐವತ್ತೊಂಬತ್ತು ವರ್ಷಗಳ ಸುಧೀರ್ಘ ರಾಜಕಾರಣದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ದ್ವಾಪರಾಯುಗದ ಧರ್ಮರಾಯನಂತೆ ಧರ್ಮದ ರಾಜಕಾರಣ ಮಾಡಿದ್ದೇನೆ. ಕಳೆದ ಲೋಕಸಭೆಯ ಕೊನೆಯ ದಿನ ಮುಂದೆ ಸ್ಪರ್ಧೆ ಮಾಡಬಾರದು ಎಂದು ತೀರ್ಮಾನಿಸಿದ್ದೇನೆ. ಆದರೆ ವಿಧಿಯಾಟ, ಚಕ್ರವೂಹ್ಯಕ್ಕೆ ಸಿಲುಕಿ, ಶಕುನಿ ಆಟಕ್ಕೆ ಬಲಿಯಾಗಿ ಸೋಲು ಅನುಭವಿಸಬೇಕಾಯಿತು. ಇದಕ್ಕಾಗಿ ಎದೆಗುಂದುವುದಿಲ್ಲ. ಎಲ್ಲಿ ಅವಮಾನಕ್ಕೆ ಒಳಗಾಗಿದ್ದೇನೆಯೋ ಅಲ್ಲಿಯೇ ಅಂದರೆ, ತುಮಕೂರು ಜಿಲ್ಲೆಯಲ್ಲಿಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 11ಕ್ಕೆ 11 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಿ, ಅವರ ಪರವಾಗಿ ಪ್ರಚಾರ ಮಾಡಿ, ಇತರೆ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಪಡೆಯುವುದು ಖಚಿತ ಎಂದು ದೇವೇಗೌಡ ಅವರು ಹೇಳಿದರು.

ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ದ್ವೇಷಿಸು ಎಂದು ಹೇಳಿಲ್ಲ. ಏಸು ಕ್ರಿಸ್ತ, ಮುಹಮ್ಮದ್ ಪೈಗಂಬರ್, ಗುರುನಾನಕ್ ಸೇರಿದಂತೆ ಎಲ್ಲಾ ಧರ್ಮಗಳ ಸಾರ ಒಂದೇ ಅದು ಎಲ್ಲರನ್ನೂ ಪ್ರೀತಿಸು, ಗೌರವಿಸು ಎಂಬುದಾಗಿದೆ. ಬಸವಣ್ಣ, ಬುದ್ದ, ಗಾಂಧೀಜಿ ಸಹ ಇದನ್ನೇ ಹೇಳಿದ್ದಾರೆ. ಆದರೆ ಧರ್ಮದ ಹೆಸರಿನಲ್ಲಿ ಇತ್ತೀಚಿನ ಬೆಳವಣಿಗೆಗಳು ಸರಿಯಾದ ರೀತಿಯಲ್ಲಿ ಇಲ್ಲ. ಮನುಷ್ಯನಿಗೆ ಮುಕ್ತಿ ಸಿಗುವುದು, ಹಣ, ಅಧಿಕಾರದಿಂದಲ್ಲ, ಆತ ಧರ್ಮ ಮಾರ್ಗದಿಂದ ನಡೆದಾಗ ಮಾತ್ರ. ಈ ನಿಟ್ಟಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ನಡೆಯುತ್ತಿದ್ದು, ಈತನಿಂದ ಇಂತಹ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೇನೆ ಎಂದು ಹೆಚ್.ಡಿ.ದೇವೇಗೌಡರ ಶಾಸಕರ ನಡೆಯನ್ನು ಪ್ರಶಂಸಿಸಿದರು.

ಕಳೆದ 2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದಿದ್ದಾಗ ನನ್ನ ಮಗನನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರೇ ನಮ್ಮ ಮನೆ ಬಾಗಿಲಿಗೆ ಬಂದರು. ನಿಮ್ಮ ಮಗನನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ದುಂಬಾಲು ಬಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸಲಹೆ ನೀಡಿದರೂ ಕೇಳಲಿಲ್ಲ. ಆದರೆ ಕಳೆದ ಒಂದುವರೆ ವರ್ಷ ನಾವು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ನಮಗೂ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಬೆಮೆಲ್ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ.ಆರ್.ಅಂಜನಪ್ಪ, ಉಪಾಧ್ಯಕ್ಷ ಟಿ.ಆರ್.ನಾಗರಾಜು, ಪಾಲಿಕೆ ಸದಸ್ಯರಾದ ಧರ್ಮೇಂದ್ರಕುಮಾರ್, ಮನು, ಮುಖಂಡರಾದ ದೇವರಾಜು, ಇಸ್ಮಾಯಿಲ್, ಹಾಲೆನೂರು ಆನಂತಕುಮಾರ್, ಬೈಲಪ್ಪ, ಕೃಷ್ಣೇಗೌಡ, ಶಿವಕುಮಾರ್, ಕೃಷ್ಣಮೂರ್ತಿ, ಪ್ರಸನ್ನ, ತಾಹೀರಾ ಬೇಗಂ, ಹಿರೇಹಳ್ಳಿ ಮಹೇಶ್, ಅಜಾಂ ಮತ್ತಿತರರು ಉಪಸ್ಥಿತರಿದ್ದರು.

ಆಯೋಧ್ಯೆ ತೀರ್ಪು ಏನೇ ಬರಲಿ ನಾವೆಲ್ಲರೂ ಶಾಂತಿ ಕಾಪಾಡುತ್ತೇವೆ ಎಂದು ಈಗಾಗಲೇ ಕೆಲ ಮುಸ್ಲಿಂ ಮುಖಂಡರು ಮಾತು ನೀಡಿದ್ದಾರೆ. ಅಯೋಧ್ಯೆ ಘಟನೆಗೆ ಬಿಜೆಪಿ ಕಾರಣ. ಬಾಬರಿ ಮಸೀದಿ ಕೆಡವಿದಾಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವಿತ್ತು. ಈಗಲೂ ಕೇಂದ್ರ ಮತ್ತು ರಾಜ್ಯದಲ್ಲಿ ಅದೇ ಸರಕಾರವಿದೆ. ಅವರೇ ಇದನ್ನು ನಿಭಾಯಿಸಬೇಕು. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಝೆಡ್ ಪ್ಲಸ್ ಸೆಕ್ಯೂರಿಟಿಯನ್ನು ಹಿಂಪಡೆದಿರುವುದು ಸರಿಯಲ್ಲ

-ದೇವೇಗೌಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News