ನನ್ನ-ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಮಾಜಿ ಸಚಿವ ಡಿಕೆಶಿ ಸ್ಪಷ್ಟನೆ

Update: 2019-11-08 16:19 GMT

ಮೈಸೂರು,ನ.8: ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಚಾಮುಂಡಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ನಮ್ಮ ನಾಯಕರು. ಮೊದಲು ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಈಗ ಪ್ರತಿಪಕ್ಷದ ನಾಯಕರಾಗಿದ್ದಾರೆ. ನಾನೊಬ್ಬ ಶಾಸಕ, ಅವರ ಕೈ ಕೆಳಗೆ ನಾವು ಸದಸ್ಯರಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಲಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತಿದ್ದೇವೆ ಎಂದು ಹೇಳಿದರು.

ನಾನು ಪಕ್ಷದ ಸಿಪಾಯಿ, ಪಕ್ಷ ಯಾವ ಜವಾಬ್ದಾರಿ ಕೊಡತ್ತದೊ ಅದನ್ನು ನಿಭಾಯಿಸುತ್ತೇನೆ. ನನ್ನ ತಕ್ಕಡಿ ಕೆಳಗೆ ಇದೆ. ತಕ್ಕಡಿ ತೂಗುತ್ತಿರುತ್ತದೆ. ನ್ಯಾಯ ನಾವ ಕಡೆ ಇದೆಯೋ ಆ ಕಡೆ ತೂಗುತ್ತದೆ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಸಿಗಲಿದೆ. ಕಾಲ ಚಕ್ರ ತಿರುಗಿಸುತ್ತೇನೆ. ನನ್ನ ಮುಂದಿನ ನಡೆ ಅಂತ ಏನು ಇಲ್ಲ. ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಸ್ವಲ್ಪ ದಿನಗಳವರೆಗೆ ಕಾದು ನೋಡಿ ಎಂದು ಹೇಳಿದರು.

ನಾನು 1975 ರಿಂದಲೂ ಕಾಂಗ್ರೆಸ್ ಬಾವುಟವನ್ನು ಹೊತ್ತುಕೊಂಡಿದ್ದೇನೆ. ರಾಜೀವ್ ಗಾಂಧಿ, ಬಂಗಾರಪ್ಪ ಕಾಲದಿಂದಲೂ ಸಹ ನಿಷ್ಠೆಯಿಂದ ನಡೆದುಕೊಂಡಿದ್ದೇನೆ. ಈಗಲೂ ಸಹ ಪಕ್ಷದ ಹೈ ಕಮಾಂಡ್ ಕೊಡುವ ಕೆಲಸ ಮಾಡುತ್ತೆನೆ. ನನ್ನ ರಾಷ್ಟ್ರೀಯ ನಾಯಕರು ಯಾವ ಜವಾಬ್ದಾರಿ ಕೊಡುತ್ತಾರೊ ಅದನ್ನು ನಾನು ನಿಭಾಯಿಸುತ್ತೇನೆ. ನನಗೆ ಸ್ಥಾನ ಮಾನ ನೀಡುವ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News