ಅಯೋಧ್ಯೆ ತೀರ್ಪಿನ ಬಗ್ಗೆ ರಾಜ್ಯ ರಾಜಕೀಯ ನಾಯಕರ ಪ್ರತಿಕ್ರಿಯೆ

Update: 2019-11-09 13:50 GMT

ಬೆಂಗಳೂರು, ನ.9: ಸುಪ್ರೀಂಕೋರ್ಟ್‌ನ ಈ ಆದೇಶವನ್ನು ತುಂಬಿದ ಹೃದಯದಿಂದ ಸ್ವೀಕರಿಸೋಣ. ಇದು ಯಾರ ಸೋಲೂ ಅಲ್ಲ, ಯಾರ ಗೆಲುವೂ ಅಲ್ಲ. ಈ ಕುರಿತು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಬೇಡ. ಶಾಂತಿ ಮತ್ತು ಸಾಮರಸ್ಯ ಮೇಲುಗೈ ಸಾಧಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

ಅಹಿಂಸೆಯ ಸಿದ್ಧಾಂತ ಪಾಲಿಸೋಣ: ಎಚ್.ಡಿ.ಕುಮಾರಸ್ವಾಮಿ

ರಾಮ ಜನ್ಮ ಭೂಮಿ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ. ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಂವಿಧಾನದ ಮೇಲೆ ಭರವಸೆ ಇಡೋಣ: ಸಿದ್ದರಾಮಯ್ಯ

ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ: ಪ್ರಹ್ಲಾದ ಜೋಶಿ

ಪ್ರಧಾನಿ ಮೋದಿ ಹೇಳಿದಂತೆ ಅಯೋಧ್ಯೆ ತೀರ್ಪು ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತೀರ್ಪನ್ನು ಎಲ್ಲರೂ ಸಮಚಿತ್ತತೆಯಿಂದ ಒಪ್ಪಿಕೊಳ್ಳಬೇಕು. ಆ ಮೂಲಕ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಬೇಕು ಎಂದರು. ಸುಪ್ರೀಂ ತೀರ್ಪನ್ನು ಅನಿವಾರ್ಯತೆಯಿಂದ ಒಪ್ಪಿಕೊಳ್ಳುವುದಷ್ಟೇ ಅಲ್ಲದೆ, ದೇಶದಲ್ಲಿ ಸರ್ವಧರ್ಮ ಸೌಹಾರ್ದದ ಹಿನ್ನೆಲೆಯಲ್ಲಿ ಗೌರವಿಸಬೇಕು. ಆ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದರು.

ಐತಿಹಾಸಿಕ ತೀರ್ಪು: ಬಸವರಾಜ ಬೊಮ್ಮಾಯಿ

ಅಯೋಧ್ಯೆ ಪರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದ ಎಲ್ಲ ಸಮುದಾಯದವರಿಗೂ ಸಮಾಧಾನ ತಂದಿದೆ. ಇದೊಂದು ಐತಿಹಾಸಿಕ ತೀರ್ಪು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಎಲ್ಲ ಆಯಾಮಗಳಲ್ಲಿ ಪರಿಶೀಲನೆ ಮಾಡಿ, ಎಲ್ಲ ವಾದಗಳನ್ನು ಆಲಿಸಿ ಅಂತಿಮ ತೀರ್ಪು ನೀಡಿದೆ ಎಂದರು. ನ್ಯಾಯಸಮ್ಮತ ದಾರಿ ಇದಾಗಿದ್ದು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದ ಅವರು, ಈ ತೀರ್ಪನ್ನು ಎಲ್ಲ ಧರ್ಮೀಯರು ಒಪ್ಪಿದ್ದು, ಸೌಹಾರ್ದತೆ ಕಾಪಾಡುವಂತೆ ಕರೆ ನೀಡಿರುವುದು ಸಂತಸದ ಸಂಗತಿ ಎಂದು ಹೇಳಿದರು.

ರಾಜ್ಯದಲ್ಲಿ ಅಯೋಧ್ಯೆ ತೀರ್ಪಿನ ಬಳಿಕ ಆಗಬಹುದಾದ ಅನಾಹುತಗಳನ್ನು ತಡೆಯಲು ಎಲ್ಲ ರೀತಿಯ ಕ್ರಮವನ್ನು ಕೈಗೊಳ್ಳಲಾಗಿತ್ತು. ಪೊಲೀಸ್ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಶಾಂತಿ, ಸೌರ್ಹಾದತೆ ಕಾಪಾಡುವುದು ನಮ್ಮ ಗುರಿಯಾಗಿದೆ. ಹೀಗಾಗಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.

ಜಾತ್ಯತೀತತೆ-ಸೌಹಾರ್ದತೆ ಕಾಪಾಡುವುದು ಎಲ್ಲರ ಜವಾಬ್ದಾರಿ: ದಿನೇಶ್ ಗುಂಡೂರಾವ್

ಭಾರತದ ಸರ್ವಧರ್ಮ ಸಮ್ಮಾನದೊಂದಿಗೆ ಶಾಂತಿ ಸುವಸ್ಥೆ ಕಾಪಾಡುವಂತೆ ಎಲ್ಲ ಸಮುದಾಯಗಳಲ್ಲಿ ಮನವಿ ಮಾಡುತ್ತೇವೆ. ದೇಶದಲ್ಲಿಯ ಜಾತ್ಯತೀತತೆ, ಏಕತೆ, ಸೌಹಾದರ್ತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯರ ಜವಾಬ್ದಾರಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋದ್ಯೆ ಜಮೀನು ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದರು. ಅಯೋಧ್ಯೆ ಭೂ ವಿವಾದದ ಬಗೆಗಿನ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಈ ದೇಶದ ಮೂಲ ಸಿದ್ಧಾಂತ ಸರ್ವಧರ್ಮ ಸಮಭಾವ. ಎಲ್ಲ ಧರ್ಮಗಳಿಗೆ ರಕ್ಷಣೆ ನೀಡುವಂತಹ, ಎಲ್ಲ ಧರ್ಮೀಯರು ಒಂದಾಗಿ ಬಾಳುವಂತಹ ಸಂವಿಧಾನ ನಮ್ಮಲ್ಲಿದೆ. ತೀರ್ಪಿನಿಂದ ಜಾತ್ಯತೀತ ಮೌಲ್ಯಗಳಿಗೆ ಶಕ್ತಿ ಬಂದಿದ್ದು, ದಶಕಗಳ ವಿವಾದ ಬಗೆಹರಿದಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಶಾಂತಿ, ನೆಮ್ಮದಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಯಾರೂ ಕೂಡಾ ಧೃತಿಗೆಡದೆ, ಕೆಟ್ಟ ರೀತಿಯ ಅಭಿಪ್ರಾಯ ವ್ಯಕ್ತಪಡಿಸದೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕು. ದೇಶದಲ್ಲಿ ಐಕ್ಯತೆ ಮೂಡಿಸುವಂತಾಗಬೇಕು. ದೇಶ ಅಭಿವೃದ್ಧಿ ಪಥದಲ್ಲಿ ನಡೆಯುವುದಕ್ಕೆ ಇದೊಂದು ಸನ್ನಿವೇಶ ನಮ್ಮ ಮುಂದೆ ಬಂದಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಇದನ್ನು ಯಾರ ಗೆಲುವು, ಯಾರ ಸೋಲು, ಯಾರ ಪರ, ಯಾರ ವಿರುದ್ಧ ಎಂದು ವಿಶ್ಲೇಷಿಸುವುದು ಸರಿಯಲ್ಲ. ಇದು ಯಾರ ವೈಯಕ್ತಿಕ ಜಯವೂ ಅಲ್ಲ. ಇದು ಎಲ್ಲರ ಗೆಲುವು. ಎಲ್ಲರಲ್ಲಿಯೂ ಸಾಮರಸ್ಯ ಮತ್ತು ಶಾಂತಿ ಕಾಪಾಡುವ ಜವಾಬ್ದಾರಿಯಿಂದ ದೇಶವನ್ನು ಮುನ್ನಡೆಸುವುದು ಮುಖ್ಯ. ಹಾಗಾಗಿ ನಾವೆಲ್ಲರೂ ತೀರ್ಪನ್ನು ಗೌರವಿಸಿ, ಮಾನ್ಯತೆ ನೀಡಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News