ಅಸಹಜತೆ-ವಿವಾದಗಳ ಆಗರವಾದ ‘ಸುಪ್ರೀಂ’ ತೀರ್ಪು: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್

Update: 2019-11-09 12:33 GMT

ಬೆಂಗಳೂರು, ನ.9: ಸುಪ್ರೀಂ ಕೋರ್ಟ್ ಇಂದು ಅಯೋಧ್ಯೆ ಪ್ರಕರಣದ ಬಗ್ಗೆ ನೀಡಿದ ತೀರ್ಪು ಅತೃಪ್ತಿಕರವಾಗಿದ್ದು, ನ್ಯಾಯದ ಉತ್ತುಂಗತೆ ಹಾಗೂ ಪಾರದರ್ಶಕತೆಯ ಕಡೆಗಣನೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.

1949ರ ವರೆಗೆ ಬಾಬರಿ ಮಸೀದಿಯಲ್ಲಿ ನಮಾಝ್ ನಡೆಯುತ್ತಿತ್ತೆಂದು, ಮಸೀದಿಯೊಳಗೆ ವಿಗ್ರಹಗಳನ್ನು ಅಕ್ರಮವಾಗಿ ಇಡಲಾಗಿತ್ತೆಂದೂ ಸುಪ್ರೀಂ ಕೋರ್ಟ್ ದೃಢಪಡಿಸಿದೆ. ಜಾಗದ ಹಕ್ಕಿನ ಬಗೆಗಿನ ಈ ವಿವಾದದಲ್ಲಿ ಸುಪ್ರೀಂ ಕೋರ್ಟ್‌ಗೆ ಜಾಗದ ಒಡೆತನದ ಬಗ್ಗೆ ಎಲ್ಲಾ ದಾಖಲೆಗಳು ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಆ ಬಗ್ಗೆ ನಿರ್ವಿವಾದವಾಗಿ ನ್ಯಾಯಾಲಯಕ್ಕೆ ಸಾಬೀತಾಗಿದೆ. ಇದರ ಹೊರತಾಗಿಯೂ ಬಾಬರಿ ಮಸ್ಜಿದ್ ಸ್ಥಳವನ್ನು ರಾಮಲಲ್ಲಾಗೆ ಬಿಟ್ಟು ಕೊಟ್ಟಿರುವ ಹಿಂದಿನ ನ್ಯಾಯವೇನೆಂದು ಸ್ಪಷ್ಟಪಡಿಸಿಲ್ಲ ಎಂದು ಇಲ್ಯಾಸ್ ಮುಹಮ್ಮದ್ ಹೇಳಿದ್ದಾರೆ.

ಕೇವಲ ಪುರಾತತ್ವ ಇಲಾಖೆ ನೀಡಿದ ಕುರುಹುಗಳನ್ನೇ ಏಕಪಕ್ಷೀಯವಾಗಿ ಕೈಗೆತ್ತಿಕೊಂಡು ಅಲ್ಲಿ ಬೇರೊಂದು ಕಟ್ಟಡವಿತ್ತೆಂದು ಊಹ್ಯ ನಿರ್ಧಾರಕ್ಕೆ ಬರುವುದಾದರೆ, ವಾಸ್ತವ ಹಾಗೂ ದಾಖಲೆಗಳು, ಜೀವಂತ ಸಾಕ್ಷಿಗಳು ಯಾಕೆ ಪರಿಗಣನೆಗೆ ಬರಲಿಲ್ಲ ಎಂಬುವುದು ಅರ್ಥವಾಗದ ಪ್ರಶ್ನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಬೇಕಾಗಿದೆಯಾದರೂ, ಈ ತೀರ್ಪು ಅಸಹಜತೆ, ಅಪಾರದರ್ಶಕತೆ ಹಾಗೂ ಹಲವು ವಿವಾದಗಳನ್ನು ಹುಟ್ಟು ಹಾಕಿದೆ ಎಂದು ಇಲ್ಯಾಸ್ ಮುಹಮ್ಮದ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News