ರಾಜ್ಯದಲ್ಲಿ ಅಧಿಕವಾಗುತ್ತಿರುವ ಕ್ಷಯರೋಗ ಪ್ರಕರಣಗಳು: 72,105 ಜನರಲ್ಲಿ ರೋಗ ಪತ್ತೆ

Update: 2019-11-09 16:23 GMT

ಬೆಂಗಳೂರು, ನ.9: ರಾಜ್ಯದಲ್ಲಿ ಕ್ಷಯ ರೋಗ ಅಕ್ಷಯವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಹತ್ತು ತಿಂಗಳಲ್ಲಿ (ಅ.25 ರವರೆಗೆ) 72,105 ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಆದರೆ ಇದರಿಂದ ಬಲಿಯಾದವರ ಸಂಖ್ಯೆ ಆರೋಗ್ಯ ಇಲಾಖೆ ಬಹಿರಂಗಗೊಳಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕ್ಷಯ ರೋಗ ನಿಯಂತ್ರಣಕ್ಕೆ ಸರಕಾರ ಹಲವಾರು ಯೋಜನೆಗಳನ್ನು ತಂದಿದ್ದರೂ ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ರಾಜ್ಯ ಸೇರಿದಂತೆ ದೇಶದಲ್ಲಿ ಕ್ಷಯರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡ 40ರಷ್ಟುಮಂದಿಗೆ ಕ್ಷಯ ರೋಗ ಸೋಂಕು ಹರಡುವ ವಾತಾವರಣದಲ್ಲಿದ್ದು, ಇದರಲ್ಲಿ ಶೇ.10 ಮಂದಿಗೆ ಕ್ಷಯರೋಗ ತಗಲುತ್ತಿದೆ.

ಪ್ರತಿ ವರ್ಷ ಕ್ಷಯರೋಗದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕ್ಷಯರೋಗದ ಬಗ್ಗೆ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡುತ್ತಿದೆ ವಿನಃ ಜಾಗೃತಿ ಮೂಡಿಸುವ ಗೋಜಿಗೆ ಹೋಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕ್ಷಯರೋಗ ಉಲ್ಬಣಿಸುತ್ತಿದೆ. 15ರಿಂದ 45 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕ್ಷಯರೋಗ ವರದಿಯಾಗುತ್ತಿದ್ದು, ಕಾಯಿಲೆ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಸೂಕ್ತ ಚಿಕಿತ್ಸೆ ಪಡೆಯದೆ ಬಹಳ ಮಂದಿ ಮೃತಪಡುತ್ತಿದ್ದಾರೆ.

ಕ್ಷಯರೋಗಕ್ಕೆ ಕಾರಣವಾಗುವ ವೈರಾಣು ಒಬ್ಬ ರೋಗಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. ರೋಗಿಯ ಉಸಿರಾಟದಿಂದ ವಾತಾವರಣದಲ್ಲಿ ಸೇರುವ ವೈರಾಣು ಶೇ.40ರಷ್ಟು ಜನಸಂಖ್ಯೆಗೆ ಕ್ಷಯರೋಗದ ಭೀತಿ ತಂದೊಡ್ಡುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಶೇ.10 ರಷ್ಟು ಮಂದಿಗೆ ಕ್ಷಯರೋಗ ವ್ಯಾಪಿಸುತ್ತಿದೆ. ಹೀಗಾಗಿ ದೇಶದ ಒಟ್ಟು ಜನಸಂಖ್ಯೆಯ ಶೇ.4ರಷ್ಟುಮಂದಿಗೆ ಕ್ಷಯರೋಗ ಇರುವುದು ದೃಢಪಟ್ಟಿದೆ.

ಕ್ಷಯರೋಗವು ಶ್ವಾಸಕೋಶಕ್ಕೆ ವ್ಯಾಪಿಸಿದರೆ ಸೋಂಕು ಸೋಕಿದವರ ಉಸಿರಾಟದಿಂದ ಬೇರೊಬ್ಬರಿಗೂ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ರೋಗದ ಲಕ್ಷಣಗಳು ತಮ್ಮ ಅಕ್ಕಪಕ್ಕದವರಲ್ಲಿ ಕಾಣಿಸಿದರೆ ಕೂಡಲೇ ಚಿಕಿತ್ಸೆ ಪಡೆಯಲು ಸಲಹೆ ನೀಡಬೇಕು. ಅಗತ್ಯವಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆೆ ಕಳುಹಿಸಬೇಕು. ತಾವೇ ಖುದ್ದಾಗಿ ಅಂತಹ ವ್ಯಕ್ತಿಯನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವುದರಿಂದ ಕ್ಷಯ ರೋಗ ತಡೆಗೆ ಸಹಾಯ ಹಸ್ತ ನೀಡಿದಂತಾಗಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕ್ಷಯ ರೋಗದ ಕರಾಳ ಇತಿಹಾಸಕ್ಕೆ ಕೊನೆ ಇಲ್ಲವೇ?: ಕ್ಷಯ ರೋಗವು ಕ್ರಿ.ಪೂ. 2500 ವರ್ಷದಿಂದಲೂ ಅಸ್ತಿತ್ವದಲ್ಲಿರುವುದಾಗಿ ತಿಳಿದುಬಂದಿದೆ. 1800ರ ಹಿಪೋಕ್ರೆಟ್ ಆಧುನಿಕ ವೈದ್ಯ ಪದ್ದತಿಯ ಪಿತಾಮಹ 1882ರಲ್ಲಿ ಡಾ. ರಾಬರ್ಟ್ ಕಾಕ್ ಮೈಕೋಬ್ಯಾಕ್ಟಿರಿಯಂ ಟ್ಯೂಬರ್ ಕ್ಯೂಲೋಸಿಸ್ ರೋಗಾಣುವಿನಿಂದ ಈ ಕಾಯಿಲೆ ಬರುವುದಾಗಿ ಪತ್ತೆ ಹಚ್ಚಿದರು. ಅಲ್ಲಿಯವರೆಗೆ ಟಿ.ಬಿ. ಕಾಯಿಲೆಗೆ ಕಾರಣವೂ ಗೊತ್ತಿರಲಿಲ್ಲ, ಚಿಕಿತ್ಸೆಯೇ ಲಭ್ಯವಿರಲಿಲ್ಲ.

ಇದೀಗ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರತಿ 1 ಕೋಟಿ ಜನಸಂಖ್ಯೆಯಲ್ಲಿ 27 ಲಕ್ಷ ಜನರಿಗೆ ಕ್ಷಯ ರೋಗ ಇದ್ದು, ಭಾರತದಲ್ಲಂತೂ ಪ್ರತಿ ಕೋಟಿ ಜನರಿಗೆ 40 ಲಕ್ಷ ಜನರಿಗೆ ಕ್ಷಯರೋಗದ ಲಕ್ಷಣಗಳಿವೆ. ಹೀಗಾಗಿ 2025ರ ವೇಳೆ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡಲು ಕೇಂದ್ರ ಸರಕಾರ ಪಣ ತೊಟ್ಟಿದೆ. ಆದರೆ ರಾಜ್ಯದಲ್ಲಿ ವಾರ್ಷಿಕವಾಗಿ ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಗಮನಿಸಿದರೆ ನಿಯಂತ್ರಿಸುವಲ್ಲಿ ಇಲಾಖೆ ವಿಫಲ ಹೊಂದಿರುವುದು ತಿಳಿದು ಬಂದಿದೆ. 

ಕ್ಷಯ ರೋಗದ ಲಕ್ಷಣಗಳು

- ಸತತವಾಗಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು

- ಜ್ವರ, ಕಫದಲ್ಲಿ ರಕ್ತ ಬೀಳುವುದು

- ಹಸಿವಾಗದಿರುವುದು, ತೂಕ ಕಳೆದುಕೊಳ್ಳುವಿಕೆ

- ಸುಸ್ತು ಮತ್ತು ನಿರಾಸಕ್ತಿ

ಚಿಕಿತ್ಸೆ ಹೇಗೆ?

ಕ್ಷಯರೋಗ ಪ್ರಾಥಮಿಕ ಹಂತದಲ್ಲಿರುವಾಗಲೇ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಆತಂಕ ಪಡದೆ ವೈದ್ಯರು ನೀಡುವ ಔಷಧಗಳನ್ನು 6 ತಿಂಗಳು ಕಡ್ಡಾಯವಾಗಿ ಸೇವಿಸಬೇಕು. ನಿರ್ಲಕ್ಷಿಸಿ ಶ್ವಾಸಕೋಶಕ್ಕೆ ವ್ಯಾಪಿಸಿದರೆ ಚಿಕಿತ್ಸೆ ಕಷ್ಟವಾಗಲಿದೆ ಎಂದು ವೈದ್ಯರು ಹೇಳುತ್ತಾರೆ.

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News