ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಸೇವಿಸಿದ್ದ ಬಾಲಕ ಮೃತ್ಯು

Update: 2019-11-12 12:39 GMT

ಚಿಕ್ಕಮಗಳೂರು, ನ.12: ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಕುಡಿದು ಅಸ್ವಸ್ಥಗೊಂಡಿದ್ದ ಬಾಲಕನೋರ್ವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗ್ರಾಮದ ಪ್ರವೀಣ್, ಪೂಜಿತಾ ದಂಪತಿಯ ಮೂರು ವರ್ಷದ ಬಾಲಕ ಅಗಸ್ತ್ಯ ಮೃತಪಟ್ಟಿದ್ದು, ಈತ ಕಳೆದ ಅಕ್ಟೋಬರ್ 24ರಂದು ದುರ್ಗದಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಪೋಷಕರು ತೋಟಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಕಳೆನಾಶಕವನ್ನು ಜ್ಯೂಸ್ ಎಂದು ಭಾವಿಸಿ ಸ್ವಲ್ಪ ಪ್ರಮಾಣದಲ್ಲಿ ಕುಡಿದಿದ್ದ. ಇದರಿಂದ ತೀವ್ರ ಅಸ್ವಸ್ಥನಾಗಿದ್ದ ಬಾಲಕನನ್ನು ಪೋಷಕರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೆಂದು ತಿಳಿದು ಬಂದಿದೆ.

ಕಳೆದ 18 ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಬಾಲಕ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News