ಡಿಕೆಶಿಯನ್ನು ಸಿಎಂ ಮಾಡಲು ಹೊರಟಿದ್ದ ರಮೇಶ್ ಈಗ ಸುಳ್ಳು ಹೇಳುತ್ತಿದ್ದಾನೆ: ಸತೀಶ್ ಜಾರಕಿಹೊಳಿ

Update: 2019-11-17 12:00 GMT

ಬೆಂಗಳೂರು, ನ. 17: ‘ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರ ತಲೆ ಮೊಬೈಲ್ ಇದ್ದಂತೆ. ಅದು ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತದೆ’ ಮಾಜಿ ಸಚಿವಸ ಸತೀಶ್ ಜಾರಕಿಹೊಳಿ ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದರು. ಹೆಬ್ಬಾಳ್ಕರ್ ನ ಕೈ-ಕಾಲು ಬಿದ್ದು ಮಂತ್ರಿಯಾಗಿದ್ದನು. ಲಕ್ಷ್ಮಿ ಹೆಬ್ಬಾಳ್ಕರ್ ಪವರ್ ಫುಲ್ ಅಲ್ಲ ಎಂದು ರಮೇಶ್ ಬಹಿರಂಗವಾಗಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಇದೇ ಕಾರಣಕ್ಕೆ ನಾನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜೊತೆಗೆ ಜಗಳ ಆಡಿದ್ದೇನೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಲಿದ್ದು, ರಮೇಶ್ ಜಾರಕಿಹೊಳಿ ಮಂತ್ರಿ ಆಗಿದ್ದು ಹೇಗೆ ಎಂದು ಅವರೇ ಹೇಳಲಿದ್ದಾರೆಂದು ತಿಳಿಸಿದರು.

ಇಪ್ಪತ್ತೈದು ವರ್ಷ ರಮೇಶ್ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಿ ಸ್ವಾಮಿ ನಿಷ್ಠೆ ಅಗತ್ಯ. ರಾಜಕೀಯದಲ್ಲಿ ಬೆಳೆಯಲು ಗಾಡ್ ಫಾದರ್‌ಗಳು ಬೇಕೆ ಬೇಕು. ಮೂರು ಪಕ್ಷಗಳಲ್ಲಿ ಈ ಸಂಸ್ಕೃತಿ ಇದೆ. ಕೈಚೀಲ ಹಿಡಿಯೋದು ಅಂದರೆ ಚಮಚಗಿರಿ ಅಲ್ಲ. ಡಿಕೆಶಿ, ಹೆಬ್ಬಾಳ್ಕರ್ ಮತ್ತು ರಮೇಶ್ ಒಂದೇ ಗುಂಪಿನಲ್ಲಿದ್ದವರು. ಇದೀಗ ಹೊರಬಂದಿದ್ದಾನೆ.

ಶೇರು ಮಾರುಕಟ್ಟೆ ಮಾದರಿಯಲ್ಲಿ ರಮೇಶ್ ಏರಿಳಿತ ಆಗುತ್ತಿರುತ್ತಾನೆ. ಮೊದಲು ಎಚ್.ಕೆ.ಪಾಟೀಲ್, ಎಸ್ಸೆಂ ಕೃಷ್ಣ, ಅನಂತರ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳುತ್ತಿದ್ದ. ಎರಡು ವರ್ಷಗಳಿಂದ ಡಿಕೆಶಿಯನ್ನು ಸಿಎಂ ಮಾಡಲು ರಮೇಶ್ ಹೊರಟಿದ್ದ. ಇದೀಗ ಸುಳ್ಳು ಹೇಳುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದ ಉಸ್ತುವಾರಿ. ಹೀಗಾಗಿ ನಾನು ಅವರ ಮನೆಗೆ ಚಹಾಕ್ಕೆ ಮಾತ್ರವಲ್ಲ, ಊಟಕ್ಕೂ ಹೋಗುತ್ತೇನೆ. ರಮೇಶ್ ಮಂತ್ರಿ ಮಾಡಿದ್ದಕ್ಕೆ ನಾನು ಹೆಬ್ಬಾಳ್ಕರ್ ವಿರೋಧಿಸಿದ್ದೆ, ಲಕ್ಷ್ಮಿ, ಡಿಕೆಶಿ ಹಾಗೂ ನನ್ನ ನಡುವೆ ಯಾವುದೇ ಜಗಳವಿಲ್ಲ. ಆದರೆ, ಹುಚ್ಚನನ್ನು ಮಂತ್ರಿ ಮಾಡಿದ್ದರು ಎಂಬ ಕೋಪವಿತ್ತು ಅಷ್ಟೇ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News