ಮಂಗಳೂರು ಗ್ರಾಮಾಂತರದ ಆಟೋ ರಿಕ್ಷಾ ಚಾಲಕರಿಗೆ ಹೈಕೋರ್ಟ್ ನಿಂದ ಸಿಹಿ ಸುದ್ದಿ
ಬೆಂಗಳೂರು, ನ.20: ಮಂಗಳೂರು ಗ್ರಾಮಾಂತರದ ಆಟೋ ರಿಕ್ಷಾಗಳು ನಗರಕ್ಕೆ ಬಂದರೆ ದಂಡ ವಿಧಿಸುತ್ತಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಸಂಬಂಧ ಆಟೋಗಳು ಮಂಗಳೂರು ನಗರದಲ್ಲಿ ಸಂಚರಿಸಲಿಕ್ಕೆ ಯಾವುದೇ ನಿರ್ಬಂಧ ಹೇರದಂತೆ ಹೈಕೋರ್ಟ್ ಆರ್ಟಿಓಗೆ ನಿರ್ದೇಶನ ನೀಡಿದೆ.
ಈ ಕುರಿತು ಮಂಗಳೂರು ಗ್ರಾಮಾಂತರ ಆಟೋ ಚಾಲಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಆಟೋ ಚಾಲಕರು ಆರ್ಟಿಓ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ದಂಡ ವಿಧಿಸದಂತೆ ಜಿಲ್ಲಾಧಿಕಾರಿಗಳು ಆರ್ಟಿಓಗೆ ಆದೇಶಿದ್ದರು.
ಆದರೂ ಸಹ ಡಿಸಿ ಆದೇಶವನ್ನು ಪಾಲಿಸದ ಆರ್ಟಿಓ ಅಧಿಕಾರಿಗಳು ಆಟೋ ಚಾಲಕರಿಗೆ ದಂಡ ವಿಧಿಸುವ ಕ್ರಮವನ್ನು ಮುಂದುವರೆಸಿದ್ದರು. ನ್ಯಾಯಪೀಠವು ಮಂಗಳೂರು ಡಿಸಿ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಆರ್ಟಿಓಗಳಿಗೆ ಸೂಚಿಸಿ, ಆಟೋಗಳಿಗೆ ನಿರ್ಬಂಧ ಹೇರದಂತೆ ನಿರ್ದೇಶನ ನೀಡಿದೆ.