ಜನರ ಋಣ ತೀರಿಸಿ, ಇಲ್ಲವೇ ರಾಜೀನಾಮೆ ನೀಡಿ: ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ

Update: 2019-11-21 12:48 GMT

ಹುಬ್ಬಳ್ಳಿ, ನ.21: ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಮಂತ್ರಿ ಸ್ಥಾನದ ಆಸೆ ತೋರಿಸಿ ಸರಕಾರ ಮಾಡಲು ಆಗುತ್ತದೆ, ನಿಮಗೆ ಮತ ನೀಡಿದ ಉತ್ತರ ಕರ್ನಾಟಕದ ಮತದಾರರ ಹಕ್ಕಿನ ಮಹಾದಾಯಿ ನೀರು ಕೊಡಿಸಲು ನಿಮ್ಮಿಂದ ಆಗುವುದಿಲ್ಲವೇ? ಜನರ ಋಣ ತೀರಿಸಿ ಇಲ್ಲವಾದ್ರೆ ರಾಜೀನಾಮೆ ನೀಡಿ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಗುರುವಾರ ನಗರದ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಪ್ರಬಲ ಆಪರೇಷನ್ ಮಾಡುವ ಮೂಲಕ ನಮ್ಮ ಸರಕಾರ ಬೀಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಏನೇನು ಆಗಬಾರದೋ ಅದೆಲ್ಲವೂ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಭಾಗದ ಶಾಸಕರಿಗೆ ಮಂತ್ರಿ ಸ್ಥಾನ ಹಾಗೂ ಇತರ ಆಮೀಷ ತೋರಿರುವುದು ಭ್ರಷ್ಟಾಚಾರ ಅಲ್ಲವೇ? ಈ ಸರಕಾರ ಬಂದು 100 ದಿನ ಆದರೂ ಈ ಭಾಗದ ಜನರ ಪ್ರಮುಖ ಬೇಡಿಕೆ ಮಹಾದಾಯಿ ಕುಡಿಯುವ ನೀರಿನ ಯೋಜನೆಯ ಕುರಿತು ಒಂದು ನೋಟಿಫಿಕೇಷನ್ ಕೂಡ ಹೊರಡಿಸಿಲ್ಲ ಎಂದು ಅವರು ಆರೋಪಿಸಿದರು.

ನಿನ್ನೆ ನಾನು ಕೋರ್ಟ್ ಕೆಲಸದ ಹಿನ್ನೆಲೆಯಲ್ಲಿ ದಿಲ್ಲಿಗೆ ಹೋಗಿದ್ದಾಗ ಸಮಿತಿ ರಚನೆ ಮಾಡಲಾಗಿದೆ ಎಂಬುದನ್ನು ನೋಡಿದೆ. ನ್ಯಾಯಾಧಿಕರಣದಲ್ಲಿ ನಮಗೆ ಕುಡಿಯಲು 5 ಟಿಎಂಸಿಯಷ್ಟು ನೀರು ಸಿಕ್ಕಿದೆ. ಇನ್ನೂ ಹೆಚ್ಚಿನ ನೀರು ಬೇಕು ಎಂದು ನಮ್ಮ ಅರ್ಜಿ ನ್ಯಾಯಾಲಯದಲ್ಲಿ ಇದೆ. ಅದು ಆಮೇಲಿನ ವಿಚಾರ. ಸದ್ಯಕ್ಕೆ ನಮಗೆ ಸಿಕ್ಕಿರುವ ನೀರನ್ನು ಜನರಿಗೆ ತಲುಪಿಸಬೇಕಲ್ಲವೇ ಎಂದು ಶಿವಕುಮಾರ್ ಹೇಳಿದರು.

ಈ ಭಾಗದಿಂದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ ಸವದಿ ಸೇರಿ ಅನೇಕರು ರಾಜ್ಯ ಸರಕಾರದ ಉನ್ನತ ಸ್ಥಾನದಲ್ಲಿದ್ದಾರೆ. ಆದರೂ ದಿಲ್ಲಿಯಲ್ಲಿ ರಾಜ್ಯಕ್ಕೆ ಯಾವ ಪ್ರಾಮುಖ್ಯತೆ ತಂದುಕೊಟ್ಟಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.

ಮಹಾದಾಯಿ ನೀರು ಸಿಗದೆ ಈ ಭಾಗದ ಜನರು ನೋವಿನಲ್ಲಿ ಬಳಲುತ್ತಿದ್ದಾರೆ. ಈ ಜನರ ನೋವಿಗೆ ಸ್ಪಂದಿಸಲು ನಿಮಗೆ ಸಾಧ್ಯವಾಗದಿದ್ದರೆ ನೀವು ಆ ಸ್ಥಾನದಲ್ಲಿ ಕೂರಲು ಲಾಯಕ್ಕಲ್ಲ. ಈ ವಿಚಾರದಲ್ಲಿ ಕೋರ್ಟ್ ಆದೇಶ ಇದೆ, ಅಗತ್ಯ ಜಾಗ ಇದೆ, ಹಣವೂ ಇದೆ. ಬೇರೆ ಯೋಜನೆಗಳನ್ನು ಸ್ವಲ್ಪತಡೆದು ಈ ಯೋಜನೆಗೆ ಒತ್ತು ನೀಡಿದರೆ ಜನರ ಸಮಸ್ಯೆಗೆ ಬೇಗ ಪರಿಹಾರ ಸಿಗುತ್ತದೆ. ಆದರೆ ಇದಕ್ಕೆ ಒಂದು ನೋಟಿಫಿಕೇಷನ್ ಹೊರಡಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿನ ಜನ ಮತ ಹಾಕಿ ಗೆಲ್ಲಿಸಿದರಲ್ಲಾ ಅವರ ಋಣ ತೀರಿಸುವುದಕ್ಕಾದರೂ ಮಹಾದಾಯಿ ವಿಚಾರದಲ್ಲಿ ಆಸಕ್ತಿ ವಹಿಸಬೇಕಿತ್ತು. ಉಪಕಾರ ಸ್ಮರಣೆ ಇರಬೇಕು. ಇಲ್ಲವಾದರೆ ಯಡಿಯೂರಪ್ಪರಾಜೀನಾಮೆ ಕೊಟ್ಟು ಹೋಗುವುದೇ ಒಳ್ಳೆಯದು ಎಂದು ಅವರು ತಿಳಿಸಿದರು.

ದೇವಾಲಯ ಭೇಟಿ ಸೇರಿದಂತೆ ಖಾಸಗಿ ಕಾರ್ಯಕ್ರಮದ ಮೇರೆಗೆ ನಾನು ಹುಬ್ಬಳ್ಳಿಗೆ ಆಗಮಿಸಿದೆ. ನನ್ನ ಕಷ್ಟಕಾಲದಲ್ಲಿ ನನ್ನ ಪರವಾಗಿ ಹೋರಾಡಿದ, ನನಗಾಗಿ ಪೂಜೆ, ಪ್ರಾರ್ಥನೆ, ಹರಕೆ ಮಾಡಿಕೊಂಡ ಜನರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇನೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News